ಬೆಂಗಳೂರು: ‘ಕೂತರೆ ಎದ್ದೇಳಲು ಆಗಲ್ಲ. ನನ್ನಲ್ಲಿ ಶಕ್ತಿ ಇಲ್ಲ ಎಂದು ಕೆಲವರು ಅಪಹಾಸ್ಯ ಮಾಡುತ್ತಿದ್ದಾರೆ. ಶಕ್ತಿ ಇದೆ ಎಂಬುದನ್ನು ಹೋರಾಟದ ಮೂಲಕ ತೋರಿಸುತ್ತೇನೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕೆ.ಎನ್.ರಾಜಣ್ಣ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತ್ಯುತ್ತರ ನೀಡಿದರು.
ಜೆಡಿಎಸ್ ಬೆಂಗಳೂರು ನಗರ ಘಟಕ ಜೆ.ಪಿ.ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಜನತಾ ಮಿತ್ರ’ ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಭಗವಂತನ ಅನುಗ್ರಹ, ದೈವಶಕ್ತಿ ನಮ್ಮ ಮೇಲೆ ಇದೆ. ಹೋರಾಟದ ಬದುಕಿನಲ್ಲಿ ಎಂದಿಗೂ ಎದೆಗುಂದಿಲ್ಲ. ಮುಂದೆಯೂ ಎದೆಗುಂದುವುದಿಲ್ಲ’ ಎಂದರು.
‘ಹಳ್ಳಿ ರೈತನ ಮಗ, ಇವನು ಸಾಧಿಸಬಲ್ಲ ಎಂದು ಹೇಳಿದ್ದ ಮಹಾನಾಯಕರೂ ಇದ್ದಾರೆ. ಪಕ್ಷವನ್ನು ಇಲ್ಲದಂತೆ ಮಾಡಬೇಕು ಎಂದು ಹೊರಟವರೂ ಇದ್ದಾರೆ. ಅದು ಆಗುವುದಿಲ್ಲ ಎಂಬುದು ಈಗ ಗೊತ್ತಾಗಿದೆ. ಕಾರ್ಯಕರ್ತರು ಆ ಶಕ್ತಿಯನ್ನು ಉಳಿಸಿಕೊಂಡಿದ್ದಾರೆ’ ಎಂದು ಹೇಳಿದರು.
‘ನಾನು ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರಿಗೆ ಏನೆಲ್ಲಾ ಕೊಡುಗೆ ನೀಡಿದ್ದೇನೆ ಎಂಬುದನ್ನು ಮಾತನಾಡಬಲ್ಲೆ. ವಿವರವಾಗಿ ಹೇಳುವ ಕಾಲ ಬರುತ್ತದೆ. ಆಗ ಹೇಳುತ್ತೇನೆ’ ಎಂದರು.