ಬೆಂಗಳೂರು: ‘ನಗರದ ಉತ್ತಮ ಭವಿಷ್ಯಕ್ಕೆಂದು ಕೆಂಪೇಗೌಡರು ನಿರ್ಮಿಸಿದ್ದ ಕೆರೆ, ರಾಜಕಾಲುವೆಗಳನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ದೂರಿದರು.
ಆರ್.ಟಿ. ನಗರದ ಮೈದಾನದಲ್ಲಿ ಆಯೋಜಿಸಿದ್ದ ಕೆಂಪೇಗೌಡರ ಜಯಂತಿಯಲ್ಲಿ ಅವರು ಮಾತನಾಡಿದರು.
ಭೂಗಳ್ಳರು ಸಾವಿರಾರು ಕೆರೆಗಳನ್ನು ಸ್ವಾರ್ಥಕ್ಕೆ ನುಂಗಿ ಬೃಹತ್ ಕಟ್ಟಡ ಕಟ್ಟಿಸಿಕೊಂಡು ಮೆರೆಯುತ್ತಿದ್ದಾರೆ ಎಂದು ಹೇಳಿದರು.
’ಜುಲೈ 1ರಿಂದ ನಗರದಲ್ಲಿ ಜನತಾ ಯಾತ್ರೆ ಪ್ರಾರಂಭಿಸಲಿದ್ದೇವೆ. 15 ವಾಹನಗಳ ಮೂಲಕ ಪ್ರತಿಯೊಂದು ವಾರ್ಡ್ ಮತ್ತು ರಸ್ತೆಗೂ ತಲುಪಲಿದ್ದೇವೆ‘ ಎಂದರು.
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಡಾ.ಸಯ್ಯದ್ ಮೋಹಿದ್ ಅಲ್ತಾಫ್ ಹೆಸರನ್ನುಜೆಡಿಎಸ್ ರಾಜ್ಯ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಘೋಷಿಸಿದರು.
ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ, ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಪ್ರಕಾಶ್, ಹೆಬ್ಬಾಳದ ಅಧ್ಯಕ್ಷ ಎಸ್. ರುದ್ರಪ್ಪ, ಹಕೀಂ ಬಾಬು, ರಾಜಶೇಖರ್ ಹಾಜರಿದ್ದರು.