ಬೆಂಗಳೂರು: ‘ಸಿಎಎ ಹಾಗೂ ಎನ್ಆರ್ಸಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ‘ಫ್ರೀ ಕಾಶ್ಮೀರ್’ ಎಂಬ ಭಿತ್ತಿಪತ್ರ ಪ್ರದರ್ಶಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್ ಪರ ವಕಲಾತ್ತು ವಹಿಸದಂತೆ ಯಾವುದೇ ನಿರ್ಣಯ ಕೈಗೊಂಡಿಲ್ಲ’ ಎಂದು ಹೈಕೋರ್ಟ್ಗೆ ಮೈಸೂರು ಜಿಲ್ಲಾ ವಕೀಲರ ಸಂಘ ಸ್ಪಷ್ಟಪಡಿಸಿದೆ.
‘ಸಂಘದ ಸದಸ್ಯ ವಕೀಲರೊಬ್ಬರು ನಳಿನಿ ಅವರ ಪರ ವಕಾಲತ್ತು ವಹಿಸಿದ್ದು, ಈಗಾಗಲೇ ಅವರು ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ’ ಎಂದು ಸಂಘದ ಪರ ವಕೀಲರು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠಕ್ಕೆ ವಿವರಿಸಿದರು.
2020ರ ಜನವರಿ 8ರಂದು ನಡೆದ ಪ್ರತಿಭಟನೆ ಸಂದರ್ಭದಲ್ಲಿ ಮಾನಸ ಗಂಗೋತ್ರಿಯಲ್ಲಿ ‘ಫ್ರೀ ಕಾಶ್ಮೀರ್’ ಫಲಕವನ್ನು ಹಿಡಿದಿದ್ದಕ್ಕಾಗಿ ನಳಿನಿ ಬಾಲಕುಮಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ತುಮಕೂರು ವಕೀಲ ಎಲ್. ರಮೇಶ್ ನಾಯಕ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.