ಬೆಂಗಳೂರು: ‘ದಂಪತಿ ಮಧ್ಯೆಜಗಳವಿದೆ ಹಾಗೂ ಅವರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ ಎಂದ ಮಾತ್ರಕ್ಕೆ ವಿವಾಹ ವಿಚ್ಛೇದನದ ಮನವಿಯನ್ನು ಒಪ್ಪಿ ಡಿಕ್ರಿ ನೀಡುವುದು ಸಮಂಜಸವಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಕುರಿತಂತೆ ಪತಿಯ ವಿವಾಹ ವಿಚ್ಛೇದನಕ್ಕೆ ಡಿಕ್ರಿಯ ಮುದ್ರೆಯೊತ್ತಿದ್ದಬೆಂಗಳೂರಿನ ನಾಲ್ಕನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರ ಆದೇಶವನ್ನು ನ್ಯಾಯಮೂರ್ತಿ ಅಲೋಕ್ ಅರಾಧೆ ಹಾಗೂ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ತಳ್ಳಿ ಹಾಕಿದೆ. ಹಿಂದೂ ವಿವಾಹ ಕಾಯ್ದೆ–1955ರ ಕಲಂ 13 (1)(ಐಎ) ಮತ್ತು (ಐಬಿ) ಅನ್ವಯ ಕೋರಲಾಗಿದ್ದವಿವಾಹ ವಿಚ್ಛೇದನದ ಡಿಕ್ರಿಯನ್ನು ರದ್ದುಗೊಳಿಸಿದೆ.
‘ಅರ್ಜಿದಾರ ದಂಪತಿಯ ಮಧ್ಯೆ ಸರಿಪಡಿಸಲಾಗದಂತಹ ಕಂದಕವಿದೆ. ಒಂಬತ್ತು ವರ್ಷಗಳಿಂದ ಅವರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಹಾಗಾಗಿ ಇದು ವಿವಾಹ ವಿಚ್ಛೇದನಕ್ಕೆ ಅರ್ಹವಾಗಿದೆ ಎಂಬ ಅಭಿಪ್ರಾಯದೊಂದಿಗೆ ಕೌಟುಂಬಿಕ ನ್ಯಾಯಾಲಯ ವಿಚ್ಛೇದನದ ಡಿಕ್ರಿ ನೀಡಿರುವುದು ಸರಿಯಲ್ಲ. ಪತಿ–ಪತ್ನಿಯರ ಆರೋಪಗಳನ್ನು ಆಯಾ ಸಮಾಜದ ರೀತಿ ರಿವಾಜುಗಳ ನಿರ್ದಿಷ್ಟ ತಳಹದಿಯಲ್ಲಿ ಗಮನಿಸಬೇಕಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣವೇನು?:’ನನ್ನ ಹೆಂಡತಿ ಮದುವೆಯಾದ ತಕ್ಷಣ ಪ್ರತ್ಯೇಕ ಮನೆ ಮಾಡಬೇಕು ಎಂದು ಒತ್ತಾಯಿಸಿ ಪದೇ ಪದೇ ಜಗಳ ತೆಗೆಯುತ್ತಿದ್ದಳು. ಹೇಳದೇ ಕೇಳದೇ ತವರಿಗೆ ಮತ್ತು ಸಹೋದರಿಯ ಮನೆಗೆ ಹೋಗುತ್ತಿದ್ದಳು. ನನ್ನ ತಾಯಿ ಮತ್ತು ತಮ್ಮನನ್ನು ತೊರೆದು ಬರುವಂತೆ ಒತ್ತಾಯಿಸುತ್ತಿದ್ದಳು. ಇದನ್ನು ನಾನು ಒಪ್ಪಿರಲಿಲ್ಲ. ಇದಕ್ಕೆ ಮುನಿಸಿಕೊಂಡು ತವರಿಗೆ ಹೇಳದೇ ಕೇಳದೆ ಹೋದವಳನ್ನು ನಾನು ಎಷ್ಟು ಕರೆದರೂ ಬರಲಿಲ್ಲ. ಆಗ ವಕೀಲರ ಮುಖಾಂತರ ನೋಟಿಸ್ ಕೊಡಿಸಿದ್ದಕ್ಕೆ ನನ್ನ ಮತ್ತು ಕುಟುಂಬದ ಸದಸ್ಯರ ವಿರುದ್ಧ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಳು. ಹೀಗಾಗಿ, ನನಗೆ ಪತ್ನಿಯಿಂದ ವಿಚ್ಛೇದನ ಬೇಕು’ ಎಂದು ಕೋರಿದ್ದ ಪತಿಯ ಮನವಿಯನ್ನು ಕೌಟುಂಬಿಕ ನ್ಯಾಯಾಲಯ ಮಾನ್ಯ ಮಾಡಿತ್ತು.
ಈ ಮನವಿಯನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು. ‘ಪತ್ನಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು ಎಂದ ಮಾತ್ರಕ್ಕೆ ಅದನ್ನು ಕ್ರೌರ್ಯ ಎಂದು ಒಪ್ಪಲಾಗದು. ಕ್ರೌರ್ಯ ಎಂಬ ಪದವನ್ನು ಗಮನಿಸುವಾಗ ಅದು ದೈಹಿಕವಾಗಿ ಅಥವಾ ಮಾನಸಿಕವಾಗಿ ಅಪಾಯ ಒಡ್ಡುವಂತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಮಾನಸಿಕ ಅಪಾಯಗಳಿವೆ ಎಂದಾದರೆ ಆ ಪತಿ–ಪತ್ನಿ ಹೊಂದಿರುವ ಸಾಮಾಜಿಕ ಮೌಲ್ಯ, ಅಂತಸ್ತು ಮತ್ತು ಅವರು ಎಂತಹ ಪರಿಸರದಲ್ಲಿ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ಗುರುತಿಸಬೇಕಾಗುತ್ತದೆ’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.