ಬೆಂಗಳೂರು: ಎಫ್ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ಎನ್ನಲಾದ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಇಬ್ಬರು ನೌಕರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೆಪಿಎಸ್ಸಿ ಎಸ್ಡಿಎ ರಮೇಶ್ ಹಾಗೂ ಬೆರಳಚ್ಚುಗಾರ್ತಿ ಸನಾ ಬೇಡಿ ಬಂಧಿತರು. ಇವರೇ ಪ್ರಶ್ನೆಪತ್ರಿಕೆ ಸೋರಿಕೆ ಸೂತ್ರಧಾರಿಗಳು. ಇವರೇ ಪ್ರಕರಣದ ಪ್ರಮುಖ ಆರೋಪಿಗಳು ಎಂಬುದು ಸಿಸಿಬಿ ತನಿಖೆಯಿಂದ ಗೊತ್ತಾಗಿದೆ.
'ಪರೀಕ್ಷೆ ನಿಯಂತ್ರಕರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸನಾ ಬೇಡಿ ಎಂಬಾಕೆಯೇ ಪ್ರಶ್ನೆಪತ್ರಿಕೆಯನ್ನು ರಮೇಶ್ಗೆ ನೀಡಿದ್ದಳು. ನಂತರ, ಅದೇ ಪ್ರಶ್ನೆಪತ್ರಿಕೆಯನ್ನು ರಮೇಶ್, ವಾಣಿಜ್ಯ ತೆರಿಗೆ ಇಲಾಖೆಯ ಇನ್ಸ್ಪೆಕ್ಟರ್ ಚಂದ್ರು ಹಾಗೂ ಇತರಿಗೆ ಮಾರಿದ್ದ. ನಂತರವೇ ಅದು ಅಭ್ಯರ್ಥಿಗಳ ಕೈ ಸೇರಿತ್ತು' ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ ಪಾಟೀಲ ಹೇಳಿದರು.
'ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಕಸ್ಟಡಿಗೆ ಪಡೆಯಲಾಗುವುದು. ಅವರ ವಿಚಾರಣೆ ಬಳಿಕವೇ ಮತ್ತಷ್ಟು ಮಾಹಿತಿ ಹೊರಬರಬೇಕಿದೆ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.