ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ: ಡಬಲ್ ಎಂಜಿನ್ ಸರ್ಕಾರ ರಾಜ್ಯಕ್ಕೆ ಟ್ರಬಲ್‌ ಎಂಜಿನ್‌– ಸುರ್ಜೇವಾಲಾ

Last Updated 31 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನವೇ ರಾಜ್ಯದಲ್ಲಿ ಚುನಾವಣಾ ಪ್ರಚಾರ ಬಿರುಸು ಪಡೆದಿತ್ತು. ಈಗ ಚುನಾವಣಾ ದಿನಾಂಕವೂ ಪ್ರಕಟವಾಗಿದೆ. ವಿವಿಧ ಪಕ್ಷಗಳ ನಾಯಕರು ಪ್ರಚಾರಕ್ಕೆ ಧುಮುಕಿದ್ದಾರೆ. ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರೂ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಪಕ್ಷದ ಕಾರ್ಯತಂತ್ರ, ಗೆಲುವಿನ ಸಾಧ್ಯತೆ ಮತ್ತು ಮತದಾರರ ಮನಃಸ್ಥಿತಿ ಕುರಿತು ಅವರು ‘ಪ್ರಜಾವಾಣಿ’ ಜೊತೆಗೆ ಮಾತನಾಡಿದ್ದಾರೆ

---

l ಕಾಂಗ್ರೆಸ್‌ ಉಸ್ತುವಾರಿಯಾಗಿ ಇಡೀ ರಾಜ್ಯದಲ್ಲಿ ಓಡಾಡಿದ್ದೀರಿ. ನಿಮ್ಮ ಪಕ್ಷದ ಸಂಘಟನೆ ಬಗ್ಗೆ ಏನು ಹೇಳುತ್ತೀರಿ?

ಇಡೀ ಕರ್ನಾಟಕವನ್ನು ಮೂರು ಬಾರಿ ಸುತ್ತುಹಾಕಿದ್ದೀನಿ. ಬದಲಾವಣೆಗಾಗಿನ ತುಡಿತ ಜನರಲ್ಲಿ ಎದ್ದು ಕಾಣುತ್ತಿದೆ. ತಾವು ಮೋಸಹೋಗಿದ್ದೇವೆ ಎಂಬ ಭಾವನೆ ರಾಜ್ಯದ ಜನರಲ್ಲಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಿಜೆಪಿಯ 40 ಪರ್ಸೆಂಟ್‌ ಸರ್ಕಾರವು ರಾಜ್ಯವನ್ನು ಹೇಗೆ ಲೂಟಿ ಮಾಡಿದೆಯೆಂದರೆ, ಜನರ ಉಸಿರುಕಟ್ಟಿದೆ. ತಾವು ವಂಚನೆಗೆ ಒಳಗಾಗಿದ್ದೇವೆ ಎಂಬ ಭಾವನೆ ರಾಜ್ಯದ ಯುವಜನರಲ್ಲಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಜನರಲ್ಲಿ ಎದ್ದು ಕಾಣುತ್ತಿದೆ.

ಸರ್ಕಾರಿ ಉದ್ಯೋಗದ ನೇಮಕಾತಿಯಲ್ಲಿ ಸಾಲು ಸಾಲು ಹಗರಣಗಳು ನಡೆದಿವೆ. ಪಿಎಸ್‌ಐ ನೇಮಕಾತಿ ಹಗರಣ, ಸಹಾಯಕ ಎಂಜಿನಿಯರ್ ನೇಮಕಾತಿ ಹಗರಣ, ಜಿಲ್ಲಾ ಸಹಕಾರಿ ಬ್ಯಾಂಕ್‌ಗಳ ನೇಮಕಾತಿ ಹಗರಣ, ಸಹಾಯಕ ಪ್ರಾಧ್ಯಾಪಕ ನೇಮಕಾತಿ ಹಗರಣಗಳು ರಾಜ್ಯದ ಯುವಜನರ ಭವಿಷ್ಯವನ್ನು ಮಂಕಾಗಿಸಿವೆ.

ಬೊಮ್ಮಾಯಿ ಸರ್ಕಾರವು, 90 ದಿನಗಳಲ್ಲಿ ಮೂರು ಬಾರಿ ಮೀಸಲಾತಿಯನ್ನು ಮರುವರ್ಗೀಕರಿಸಿದೆ. ಚುನಾವಣಾ ಲಾಭಕ್ಕಾಗಿ ಮೀಸಲಾತಿಯನ್ನು ತಿರುಚುವುದು ಬಿಜೆಪಿಗೆ ಸಾಮಾನ್ಯ ಎಂಬಂತಾಗಿದೆ ಎಂಬುದು ಸಾಬೀತಾಗಿದೆ. ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮುಸ್ಲಿಮರನ್ನು ವಂಚಿಸಿರುವುದು ದೃಢಪಟ್ಟಿದೆ. ಮೀಸಲಾತಿಯನ್ನು ಪದೇ ಪದೇ ವರ್ಗೀಕರಣ ಮಾಡಿದ್ದು ಚುನಾವಣಾ ಗಿಮಿಕ್‌ ಮಾತ್ರ, ಬದಲಿಗೆ ಅದರಿಂದ ಯಾರಿಗೂ ಲಾಭವಿಲ್ಲ. ಈ ಮರುವರ್ಗೀಕರಣಗಳು ಸಂವಿಧಾನಬದ್ಧವಲ್ಲ ಎಂಬುದು ಈ ಎಲ್ಲಾ ಸಮುದಾಯಗಳಿಗೆ ಮನದಟ್ಟಾಗಿದೆ. ಇದು ಬೊಮ್ಮಾಯಿ ಸರ್ಕಾರದ ಅಪ್ರಾಮಾಣಿಕತೆಯ ಪರಮಾವಧಿ.

ಬಿಜೆಪಿಯ ಒಡೆದು ಆಳುವ ನೀತಿಯ ವಿರುದ್ಧ ರಾಜ್ಯದಾದ್ಯಂತ ಆಕ್ರೋಶ ಹೆಚ್ಚಾಗುತ್ತಿದೆ ಮತ್ತು ಜನರು ಬದಲಾವಣೆಗಾಗಿ ಕಾತರರಾಗಿದ್ದಾರೆ. ಬಿಜೆಪಿಯ 40 ಪರ್ಸೆಂಟ್‌ ಸರ್ಕಾರವನ್ನು ಜನರು, ಈ ಚುನಾವಣೆಯಲ್ಲಿ 40 ಸ್ಥಾನಗಳಿಗೆ ಇಳಿಸಲಿದ್ದಾರೆ.

l ಚುನಾವಣೆ ಎದುರಿನಲ್ಲಿದೆ. ನಿಮ್ಮ ಕಾರ್ಯತಂತ್ರವೇನು?

ಕಾಂಗ್ರೆಸ್‌ನ ಕಾರ್ಯತಂತ್ರ ಸ್ಪಷ್ಟವಾಗಿದೆ ಮತ್ತು ನಿಚ್ಚಳವಾಗಿದೆ. ‘ಬ್ರ್ಯಾಂಡ್‌ ಕರ್ನಾಟಕ’ವನ್ನು ನಾವು ಮರುಕಟ್ಟುತ್ತೇವೆ. ಇಡೀ ದೇಶವು ಕರ್ನಾಟಕವನ್ನು ಮಾದರಿಯಾಗಿ ಸ್ವೀಕರಿಸುವಂತೆ ಮಾಡುತ್ತೇವೆ. ಜನರನ್ನು ಪರಸ್ಪರ ಎತ್ತಿಕಟ್ಟುವ ಮತ್ತು ಸಂಘರ್ಷವನ್ನು ಹುಟ್ಟುಹಾಕುವಂತಹ ಕೃತ್ಯಗಳಿಂದ ರಾಜ್ಯದ ವರ್ಚಸ್ಸು ಕುಗ್ಗಿದೆ. ನಾವು ಕನ್ನಡಿಗರ ಪ್ರತಿಷ್ಠೆಯನ್ನು ಮರುಸ್ಥಾಪಿಸುತ್ತೇವೆ. ರಾಜ್ಯದಲ್ಲೀಗ ಬಿಜೆಪಿಯ ವಿಭಜನೆ ಮತ್ತು ವಂಚನೆಯ ಸಂಕಥನಗಳು ತಾಂಡವವಾಡುತ್ತಿವೆ. ನಾವು ಅಭಿವೃದ್ಧಿ ಮತ್ತು ಪ್ರಗತಿಯ ಹಾದಿಯನ್ನು ಸ್ಥಾಪಿಸುತ್ತೇವೆ.

ಈಗ ರಾಜ್ಯದಲ್ಲಿ ದುರಾಡಳಿತವಿದೆ, ಸರ್ಕಾರ ಜಡವಾಗಿದೆ. ಅವುಗಳ ಬದಲಿಗೆ ಜನರಿಗೆ ಸ್ಪಂದಿಸುವ, ಉತ್ತರದಾಯಿ ಆಡಳಿತವನ್ನು ಕಾಂಗ್ರೆಸ್‌ ಸರ್ಕಾರ ನೀಡಲಿದೆ. ಕಾಂಗ್ರೆಸ್‌ ಈಗ ನೀಡಿರುವ ಗ್ಯಾರೆಂಟಿಗಳನ್ನು ಮೊದಲ ಸಂಪುಟ ಸಭೆಯಲ್ಲಿಯೇ ಜಾರಿಗೆ ತರುತ್ತೇವೆ. ಅನ್ವೇಷಣೆ, ಕ್ರೀಯಾಶೀಲತೆಗೆ ತೊಡಿಸಿರುವ ಸಂಕೋಲೆಗಳನ್ನು ತೊಡೆದುಹಾಕುತ್ತೇವೆ. ‘ನವ ಕರ್ನಾಟಕ’ದ ಧ್ಯೇಯಗಳನ್ನು ರಾಜ್ಯದ ಜನರು, ದೇಶ ಮತ್ತು ವಿಶ್ವದ ಎದುರು ತೆರೆದಿಡುತ್ತೇವೆ.

l ಅಭ್ಯರ್ಥಿಗಳ ಆಯ್ಕೆಯಲ್ಲಿ ವಿಳಂಬವೇಕೆ?

ಅಭ್ಯರ್ಥಿಗಳ ಆಯ್ಕೆಯಲ್ಲಿ ವಿಳಂಬದ ಪ್ರಶ್ನೆಯೇ ಇಲ್ಲ. ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ನಾವು 124 ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದ್ದನ್ನು ನೀವು ಗಮನಿಸಿದ್ದೀರಿ ಎಂದುಕೊಂಡಿದ್ದೇನೆ. ಉಳಿದ ಅಭ್ಯರ್ಥಿಗಳನ್ನೂ ಶೀಘ್ರವೇ ಅಂತಿಮಗೊಳಿಸುತ್ತೇವೆ. ಆದರೆ, ಬಿಜೆಪಿಯಲ್ಲಿ ನೋಡಿ. ಬಿಜೆಪಿಯ ಹಲವು ಹಾಲಿ ಶಾಸಕರು ಸ್ಪರ್ಧಿಸಬೇಕೇ ಬೇಡವೇ ಎಂದು ಮೀನಮೇಷ ಎಣಿಸುತ್ತಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿಯೇ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಎಂದು ಹುಡುಕುತ್ತಿರುವ ಸಂದರ್ಭದಲ್ಲಿ, ಬಿಜೆಪಿ ಈವರೆಗೆ ಒಬ್ಬ ಅಭ್ಯರ್ಥಿಯನ್ನೂ ಘೋಷಿಸದೇ ಇರುವುದರಲ್ಲಿ ಆಶ್ಚರ್ಯವಿಲ್ಲ.

l ಗೆಲ್ಲುವ ಸಾಧ್ಯತೆ ಒಂದೇ ಅಭ್ಯರ್ಥಿ ಆಯ್ಕೆಯ ಮಾನದಂಡವೇ ಅಥವಾ ಜಾತಿ ಮತ್ತು ಧರ್ಮವನ್ನೂ ಪರಿಗಣಿಸುತ್ತೀರಾ?

ಪಕ್ಷ ನಿಷ್ಠೆ, ಪಕ್ಷದ ಸಿದ್ಧಾಂತದಲ್ಲಿ ನಂಬಿಕೆ, ಜನಸೇವೆಯ ಬದ್ಧತೆ, ಸಾಮಾಜಿಕ ನ್ಯಾಯ ಮತ್ತು ಸುಧಾರಣೆಗಾಗಿನ ತುಡಿತ ಹಾಗೂ ಗೆಲ್ಲುವ ಸಾಧ್ಯತೆಗಳನ್ನು ಪರಿಗಣಿಸುತ್ತೇವೆ.

l ಟಿಕೆಟ್‌ ಹಂಚಿಕೆ ಕಾಂಗ್ರೆಸ್‌ಗೆ ದೊಡ್ಡ ಸವಾಲಾಗಿದೆಯಲ್ಲವೇ?

ಇದು ತಪ್ಪು ಗ್ರಹಿಕೆ. ಒಮ್ಮತದಿಂದ ಅಭ್ಯರ್ಥಿಗಳ ಆಯ್ಕೆ ನಡೆದಿದೆ. ಇದರ ಶ್ರೇಯ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಪರಿಶೀಲನಾ ಸಮಿತಿ ಸದಸ್ಯರಿಗೆ ಸಲ್ಲಬೇಕು. ಬಿಜೆ‍ಪಿಯಲ್ಲಿ ಅರಾಜಕತೆ ಮತ್ತು ಬಣ ರಾಜಕಾರಣವಿದೆ. ಆದರೆ, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ವ್ಯಕ್ತಿಗತ ಹಿತಾಸಕ್ತಿಗಿಂತ ರಾಜ್ಯದ ಅಭಿವೃದ್ಧಿಗೆ ಆದ್ಯತೆ ಎಂಬುದನ್ನು ನಾವು ಸಾಬೀತು ಮಾಡಿದ್ದೇವೆ.

l ಈ ಚುನಾವಣೆಯಲ್ಲಿ ನಿಮ್ಮ ಮುಖ್ಯ ಕಾರ್ಯಸೂಚಿಯೇನು?

ಕಲ್ಯಾಣ ರಾಜ್ಯವನ್ನು ಒಳಗೊಂಡ ಒಂದು ಅಭಿವೃದ್ಧಿ ಮಾದರಿಯನ್ನು ರೂಪಿಸುವುದು ನಮ್ಮ ಕಾರ್ಯಸೂಚಿ. ಕುಟುಂಬದ ಮಹಿಳಾ ಯಜಮಾನಿಗೆ ಮಾಸಿಕ ₹2,000 ನೀಡುವ ಗೃಹಲಕ್ಷ್ಮಿ ಘೋಷಣೆಯು, ಅತೀವ ಹಣದುಬ್ಬರದಿಂದ ಬಸವಳಿದವರಿಗೆ ನೆರವಾಗಲಿದೆ. ಗೃಹಜ್ಯೋತಿ ಘೋಷಣೆಯ ಅಡಿಯಲ್ಲಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತದೆ. ಬಿಪಿಎಲ್‌ ಚೀಟಿ ಹೊಂದಿರುವ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ನೀಡುವ ಅನ್ನಭಾಗ್ಯ ಘೋಷಣೆಯು ಹಸಿವನ್ನು ಹೋಗಲಾಡಿಸಲಿದೆ. ಪದವೀಧರರಿಗೆ ಮತ್ತು ಡಿಪ್ಲೊಮಾ ಮಾಡಿದವರಿಗೆ ಎರಡು ವರ್ಷಗಳವರೆಗೆ ಕ್ರಮವಾಗಿ ₹3,000 ಮತ್ತು ₹1,500 ನೀಡುವ ಯುವನಿಧಿ ಕಾರ್ಯಕ್ರಮವು ಯುವಜನರ ಸಬಲೀಕರಣಕ್ಕೆ ಕಾರಣವಾಗಲಿದೆ.

l ರಾಜ್ಯದಲ್ಲಿನ ಭ್ರಷ್ಟಾಚಾರದ ಬಗ್ಗೆ ನೀವು ಮಾತನಾಡಿದಾಗಲೆಲ್ಲಾ, ‘ಕಾಂಗ್ರೆಸ್‌ ಸರ್ಕಾರದಲ್ಲಿ ಹೀಗಿತ್ತು’ ಎಂದು ಬಿಜೆಪಿ ತಿರುಗೇಟು ನೀಡುತ್ತದೆ. ಈ ಬಗ್ಗೆ ಏನು ಹೇಳುತ್ತೀರಿ?

ಕರ್ನಾಟದಲ್ಲಿನ ಬಿಜೆಪಿ ಸರ್ಕಾರವು ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎಂಬುದರಲ್ಲಿ ಎರಡು ಮಾತಿಲ್ಲ. ಇದು ಕಾಂಗ್ರೆಸ್‌ ಮಾಡುತ್ತಿರುವ ಆರೋಪವಲ್ಲ. ಶೇ 40ರಷ್ಟು ಕಮಿಷನ್‌ ಬಗ್ಗೆ ಗುತ್ತಿಗೆದಾರರ ಸಂಘ, ಖಾಸಗಿ ಶಾಲೆಗಳ ಒಕ್ಕೂಟ ಬಹಿರಂಗವಾಗಿ ಹೇಳಿರಲಿಲ್ಲವೇ ಮತ್ತು ಪ್ರಧಾನಿಗೇ ಪತ್ರ ಬರೆದಿರಲಿಲ್ಲವೇ? ಮಠಕ್ಕೆ ನೀಡಿದ ಅನುದಾನ ಬಿಡುಗಡೆಗೆ ಶೇ 30ರಷ್ಟು ಕಮಿಷನ್‌ ಕೇಳಲಾಗುತ್ತಿದೆ ಎಂದು ಗದಗದ ದಿಂಗಾಲೇಶ್ವರ ಸ್ವಾಮೀಜಿ ಹೇಳಿರಲಿಲ್ಲವೇ? ಯತ್ನಾಳರಂತಹ ಬಿಜೆಪಿ ನಾಯಕರೇ ಭ್ರಷ್ಟಾಚಾರ ಮತ್ತು ಮುಖ್ಯಮಂತ್ರಿ ಹುದ್ದೆಗೆ ಹಣ ನಿಗದಿಯಾಗಿತ್ತು ಎಂದು ಸಾರ್ವಜನಿಕವಾಗಿ ಹೇಳಿರಲಿಲ್ಲವೇ? ಸಚಿವರೊಬ್ಬರು ಮುಖ್ಯಮಂತ್ರಿಯ ವಿರುದ್ಧ ರಾಜ್ಯಪಾಲರಲ್ಲಿಗೆ ಹೋಗಿರಲಿಲ್ಲವೇ? ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ದುರ್ನಾತದಿಂದ ವಾಕರಿಕೆ ಬರುತ್ತದೆ ಎಂಬುದಕ್ಕೆ ಹಲವು ನಿದರ್ಶನಗಳಿವೆ. ನಮ್ಮತ್ತ ಬೊಟ್ಟು ಮಾಡುತ್ತಿರುವ ಬಿಜೆಪಿ ನಾಯಕರಿಗೆ ‘ಭ್ರಷ್ಟಾಚಾರ ಮತ್ತು ದುರಾಡಳಿತದ ಗಾಜಿನ ಮನೆಯಲ್ಲಿ ನೀವು ನಿಂತಿದ್ದೀರಿ, ಅದು ಚೂರಾಗಲಿದೆ’ ಎಂದಷ್ಟೇ ಹೇಳಲು ಬಯಸುತ್ತೇನೆ.

l ಕಾಂಗ್ರೆಸ್‌ ಒಡೆದ ಮನೆಯಾಗಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಮಧ್ಯೆ ಭಿನ್ನಾಭಿಪ್ರಾಯವಿದೆ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಲು ಕಾಂಗ್ರೆಸ್‌ಗೆ ಏಕೆ ಸಾಧ್ಯವಾಗುತ್ತಿಲ್ಲ? ಇದರ ಮಧ್ಯೆ ಬಹುಮತ ಹೇಗೆ ಸಾಧಿಸುತ್ತೀರಿ?

ಕಾಂಗ್ರೆಸ್‌ ಎಂದಿಗಿಂತ ಇಂದು ಹೆಚ್ಚು ಒಗ್ಗಟ್ಟಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಒಟ್ಟಿಗೇ ಕೆಲಸ ಮಾಡುತ್ತಿದ್ದಾರೆ, ಒಟ್ಟಿಗೇ ಪ್ರಯಾಣಿಸುತ್ತಿದ್ದಾರೆ, ನಮ್ಮ ಎಲ್ಲಾ ನಾಯಕರ ಜತೆಗೂಡಿ ಹೋರಾಡುತ್ತಿದ್ದಾರೆ. ಬಿಜೆಪಿಯಿಂದ ಕರ್ನಾಟಕವನ್ನು ರಕ್ಷಿಸಲು ನಾವೆಲ್ಲಾ ಒಟ್ಟಾಗಿ ಹೋರಾಡುತ್ತಿರುವ ಸಂದರ್ಭದಲ್ಲಿ, ಕಾಂಗ್ರೆಸ್ ಒಡೆದ ಮನೆ ಎನ್ನುವುದು ಸರಿಯಲ್ಲ. ನಾವು 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ.

l ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಅಧ್ಯಕ್ಷರಾಗಿರುವುದು, ಈ ಚುನಾವಣೆಯನ್ನು ಹೇಗೆ ಪ್ರಭಾವಿಸುತ್ತದೆ?

ಖರ್ಗೆ ಅವರು ಪಕ್ಷದ ಅಧ್ಯಕ್ಷರಾಗಿರುವುದು ನಮ್ಮ ಉತ್ಸಾಹ ಮತ್ತು ಚೈತನ್ಯವನ್ನು ಹೆಚ್ಚಿಸಿದೆ. ಒಬ್ಬ ಕನ್ನಡಿಗ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿರುವುದು ಹೆಮ್ಮೆಯ ವಿಚಾರ. ದಶಕಗಳ ಕಾಲ ಕರ್ನಾಟಕಕ್ಕಾಗಿ ಸೇವೆ ಸಲ್ಲಿಸಿದ ಅವರ ಬದ್ಧತೆಯ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವಲ್ಲಿ ಅವರ ಉಪಸ್ಥಿತಿ ಮತ್ತು ಮಾರ್ಗದರ್ಶನ ನಮಗೆ ನೆರವಿಗೆ ಬರಲಿದೆ.

l ‘ಭಾರತ್ ಜೋಡೊ ಯಾತ್ರೆ’ ಮತ್ತು ಪ್ರಜಾಧ್ವನಿ ಯಾತ್ರೆಯ ಪರಿಣಾಮಗಳೇನು?

ರಾಹುಲ್‌ ಗಾಂಧಿ ಅವರ ‘ಭಾರತ್ ಜೋಡೊ ಯಾತ್ರೆ’ ಕರ್ನಾಟಕದಲ್ಲಿ 21 ದಿನಗಳ ಕಾಲ ಸಾಗಿತ್ತು. ಹಣದುಬ್ಬರ, ನಿರುದ್ಯೋಗ, ಅಸಮಾನತೆ ಮತ್ತು ದ್ವೇಷ ರಾಜಕಾರಣದ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಡಲು ಈ ಯಾತ್ರೆ ನೆರವಾಯಿತು. ಪ್ರಜಾಧ್ವನಿ ಯಾತ್ರೆ ಈಗಾಗಲೇ 200ಕ್ಕೂ ಹೆಚ್ಚು ಕ್ಷೇತ್ರಗಳನ್ನು ಪೂರೈಸಿದೆ. ಜನರ ಸಮಸ್ಯೆಗಳಿಗೆ ಕಾಂಗ್ರೆಸ್‌ ಮಾತ್ರವೇ ಪರಿಹಾರ ಒದಗಿಸಬಲ್ಲದು ಎಂಬುದನ್ನು ಈ ಯಾತ್ರೆ ಮನವರಿಕೆ ಮಾಡಿಕೊಟ್ಟಿದೆ. ಈ ಯಾತ್ರೆಯ ಕಾರಣದಿಂದಲೇ ಕಾಂಗ್ರೆಸ್‌ ಗ್ಯಾರೆಂಟಿಗಳು ರೂಪುಗೊಂಡಿದ್ದು. ಈ ಯಾತ್ರೆಗಳು ನಿಜವಾದ ಅರ್ಥದಲ್ಲಿ ಜನರ ದನಿಯೇ ಆಗಿವೆ.

l ಪಕ್ಷ ಅಧಿಕಾರಕ್ಕೆ ಬಂದರೆ ‘ಗ್ಯಾರೆಂಟಿ’ ಯೋಜನೆಗಳ ಭರವಸೆ ಕೊಟ್ಟಿದ್ದೀರಿ. ರಾಜ್ಯವು ಈಗಾಗಲೇ ಸಾಲದಲ್ಲಿದೆ. ಹಾಗಿರುವಾಗ ಈ ಎಲ್ಲ ಯೋಜನೆಗಳಿಗೆ ಹಣ ಎಲ್ಲಿಂದು ಹೊಂದಿಸುವಿರಿ? ಕಾಂಗ್ರೆಸ್‌ ಪಕ್ಷವು ಗ್ಯಾರೆಂಟಿ ಕಾರ್ಡ್ ಅಲ್ಲ, ವಿಸಿಟಿಂಗ್ ಕಾರ್ಡ್‌ ವಿತರಿಸುತ್ತಿದೆ ಎಂದು ಬಿಜೆಪಿ ವ್ಯಂಗ್ಯವಾಡುತ್ತಿದೆ. ಏನಂತೀರಿ?

ಕಾಂಗ್ರೆಸ್‌ ‘ಗ್ಯಾರೆಂಟಿಗಳು’ ಯುಗ ಪ್ರವರ್ತಕವಾಗಿವೆ. ಮುಂದಿನ ದಿನಗಳಲ್ಲಿ ಎಲ್ಲ ರಾಜ್ಯಗಳೂ ಅವುಗಳನ್ನು ಅನುಕರಣೆ ಮಾಡಲಿವೆ. ಶೇ 40ರ ಕಮಿಷನ್‌ ವ್ಯವಸ್ಥೆಯನ್ನು ನಿಲ್ಲಿಸಿದರೆ ಈ ಎಲ್ಲ ಯೋಜನೆಗಳಿಗೆ ಸಾಕಷ್ಟು ಹಣ ದೊರೆಯುತ್ತದೆ. ರಾಜ್ಯದ ಅರ್ಥವ್ಯವಸ್ಥೆಯ ಗಾತ್ರವು ದುಪ್ಪಟ್ಟಾಗಬೇಕು. ಮುಂದಿನ ಐದು ವರ್ಷಗಳಲ್ಲಿ ಬಜೆಟ್ ಗಾತ್ರವು ₹6 ಲಕ್ಷ ಕೋಟಿಗೆ ತಲುಪಬೇಕು. ಈ ಎಲ್ಲ ಜನಕಲ್ಯಾಣ ಯೋಜನೆಗಳಿಗೆ ಬೇಕಾದಷ್ಟು ಹಣವು ದೊರೆಯುತ್ತದೆ. ಹಾಗೆಯೇ, ಕಾಂಗ್ರೆಸ್ ಗ್ಯಾರೆಂಟಿಗಳು ಉಚಿತ ಕೊಡುಗೆಗಳಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮಹಿಳೆಯರು, ಯುವ ಜನರು ಮತ್ತು ಬಡವರ ಕೈಸೇರುವ ಹಣವು ಅರ್ಥ ವ್ಯವಸ್ಥೆಯು ಹಲವು ಪಟ್ಟು ಬೆಳೆಯಲು, ಬೇಡಿಕೆ ಹೆಚ್ಚಿಸಲು ಮತ್ತು ಉದ್ಯೋಗ ಸೃಷ್ಟಿಗೆ ನೆರವಾಗುತ್ತದೆ. ರಾಜ್ಯದ ಬಿಜೆಪಿ ನಾಯಕರು ಈಗಾಗಲೇ ಸೋತವರ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಗ್ಯಾರೆಂಟಿಗಳನ್ನು ವಿರೋಧಿಸುವ ಮೂಲಕ ರಾಜ್ಯದ ಮಹಿಳೆಯರು ಮತ್ತು ಯುವ ಜನರನ್ನು ಬಿಜೆಪಿ ಅವಮಾನಿಸಿದೆ. ಈ ಚುನಾವಣೆಯಲ್ಲಿ ಜನರು ಅವರಿಗೆ ಪಾಠ ಕಲಿಸಲಿದ್ದಾರೆ.

l ರಾಜ್ಯದಲ್ಲಿ ಮೋದಿ ಅಲೆ‌ಯ ಕುರಿತು ಏನು ಹೇಳುತ್ತೀರಿ...

ಇದು ಮೋದಿ ಚುನಾವಣೆ ಅಲ್ಲ. ರಾಷ್ಟ್ರ ಮಟ್ಟದ ಚುನಾವಣೆ ಇರುವುದು 2024ರಲ್ಲಿ. ಇನ್ನೂ ಒಂದು ವಿಷಯ ನೆನಪಿನಲ್ಲಿ ಇರಿಸಿಕೊಳ್ಳಿ. ಡಬಲ್‌ ಎಂಜಿನ್‌ ಎಂದು ಹೇಳಿಕೊಳ್ಳುವ ಸರ್ಕಾರವು ಕರ್ನಾಟಕದ ಮಟ್ಟಿಗೆ ಟ್ರಬಲ್‌ ಎಂಜಿನ್‌ ಆಗಿಬಿಟ್ಟಿದೆ. ಭ್ರಷ್ಟಾಚಾರ ಹಗರಣಗಳು, ನೇಮಕಾತಿ ಹಗರಣಗಳು, ದುರಾಡಳಿತ, ಬೊಕ್ಕಸದ ಲೂಟಿ ಸೇರಿದಂತೆ ಎಲ್ಲ ರೀತಿಯ ಪ್ರಮಾದಗಳು ಮೋದಿ ಅವರ ಮೂಗಿನಡಿಯಲ್ಲಿ ನಾಲ್ಕು ವರ್ಷಗಳಿಂದ ನಡೆದಿದೆ. ಅವರು ಏಕೆ ಹಸ್ತಕ್ಷೇಪ ನಡೆಸಲಿಲ್ಲ? ಅವರು ಏಕೆ ಅದನ್ನು ನಿಲ್ಲಿಸಲಿಲ್ಲ? ಪ್ರವಾಹ ಪರಿಹಾರ ಮತ್ತು ಜಿಎಸ್‌ಟಿ ಬಾಕಿಯನ್ನು ಕನ್ನಡಿಗರಿಗೆ ನಿರಾಕರಿಸಿದ್ದು ಏಕೆ? ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಹೆಚ್ಚಳವನ್ನು ಮೋದಿ ಸರ್ಕಾರ ತಿರಸ್ಕರಿಸಿದ್ದು ಏಕೆ? ಈ ಎಲ್ಲ ವಿಚಾರಗಳ ಕುರಿತು ಪ್ರಧಾನಿ ಮೌನವಾಗಿರುವುದು ಏಕೆ? ಮೋದಿ ನೇತೃತ್ವದ ಸರ್ಕಾರವು ಕರ್ನಾಟಕಕ್ಕೆ ಹಾನಿಕರವಾಗಿ ಪರಿಣಮಿಸಿದೆ.

l ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರು?

ನಾವು ಕನ್ನಡದ ಪ್ರತಿಷ್ಠೆಯನ್ನು ಮರುಸ್ಥಾಪಿಸಲು ಹೋರಾಡುತ್ತಿದ್ದೇವೆ. ಬ್ರ್ಯಾಂಡ್ ಕರ್ನಾಟಕ ಪುನಸ್ಥಾಪನೆಗೊಂಡು ಅಭಿವೃದ್ಧಿಯುಗಕ್ಕೆ ದಾರಿ ಮಾಡಿಕೊಡಲು ಹೋರಾಡುತ್ತಿದ್ದೇವೆ. ನಮ್ಮೆಲ್ಲ ನಾಯಕರಿಗೂ ಇದುವೇ ಆದ್ಯತೆಯೇ ಹೊರತು ಅಧಿಕಾರದಲ್ಲಿ ದೊರೆಯುವ ಪಾಲು ಅಲ್ಲ. ಅಧಿಕಾರಕ್ಕೆ ಬಂದರೆ ನಾವು ಜನಸೇವಕರು ಮತ್ತು ಎಲ್ಲರೂ ಒಟ್ಟಾಗಿ ರಾಜ್ಯ ಕಟ್ಟುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT