ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಿದ ಅಬ್ಬರ | ಸ್ಥಗಿತವಾದ ಸಂಚಾರ; ಹಲವೆಡೆ ಬೆಟ್ಟ, ರಸ್ತೆ ಕುಸಿತ

ರಾಜ್ಯದಲ್ಲಿ ಮಳೆಯ ತೀವ್ರತೆ ಇಳಿಕೆ l ಮುಂದುವರಿದ ಪ್ರವಾಹ ಸ್ಥಿತಿ l ವಿವಿಧ ಜಲಾಶಯಗಳಿಂದ ನದಿಗೆ ಭಾರಿ ನೀರು
Last Updated 7 ಆಗಸ್ಟ್ 2020, 19:31 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಮತ್ತು ಇತರ ಪ್ರದೇಶಗಳಲ್ಲಿ ಮುಂಗಾರು ಮಳೆಯ ಅಬ್ಬರ ಶುಕ್ರವಾರ ಸ್ವಲ್ಪ ಮಟ್ಟಿಗೆ ತಗ್ಗಿದೆ. ಆದರೆ, ಬುಧವಾರ ರಾತ್ರಿಯಿಂದ ಸತತವಾಗಿ ಸುರಿದ ಮಳೆಯಿಂದಾಗಿ ಹಲವೆಡೆ ಗುಡ್ಡಗಳು ಕುಸಿದಿವೆ. ರಸ್ತೆಗಳಲ್ಲಿ ಬಿರುಕು, ಮಣ್ಣು ಕುಸಿತ ಮತ್ತು ಉಲ್ಬಣಗೊಂಡ ಪ್ರವಾಹ ಪರಿಸ್ಥಿತಿಯಿಂದಾಗಿ ಹಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿದೆ.

ಭಾಗಮಂಡಲದಲ್ಲಿ ಮಳೆಯಿಂದಾಗಿ ಹೆಚ್ಚು ಹಾನಿ ಉಂಟಾಗಿದೆ. ಇಲ್ಲಿನ ಚೇರಂಗಾಲದಲ್ಲಿ ಗುರುವಾರ ರಾತ್ರಿ ಮತ್ತೊಂದು ಬೆಟ್ಟ ಕುಸಿದಿದೆ. ಬ್ರಹ್ಮಗಿರಿ ಪ್ರದೇಶದಲ್ಲಿ ಗುರುವಾರವೂ ಹಲವು ಕಡೆ ಬೆಟ್ಟ ಕುಸಿದಿದೆ. ಇಲ್ಲಿ ಬುಧವಾರ ರಾತ್ರಿ ಗುಡ್ಡ ಕುಸಿದು ನಾಪತ್ತೆಯಾಗಿದ್ದ ಪ್ರಧಾನ ಅರ್ಚಕ ನಾರಾಯಣ ರಾವ್‌ ಮತ್ತು ಕುಟುಂಬದ ಪತ್ತೆ ಕಾರ್ಯಕ್ಕೆ ಭಾರಿ ಮಳೆ, ಬಿರುಗಾಳಿ ಮತ್ತು ಮಣ್ಣು ಕುಸಿತ ಅಡ್ಡಿಯಾಗಿದೆ. ರಕ್ಷಣಾ ತಂಡವು ಗುಡ್ಡ ಕುಸಿತದ ಪ್ರದೇಶಕ್ಕೆ ತಲುಪುವುದಕ್ಕೇ ಸಾಧ್ಯವಾಗಿಲ್ಲ.

ತಲಕಾವೇರಿ ರಸ್ತೆಯುದ್ದಕ್ಕೂ ಭೂಕುಸಿತ ಉಂಟಾಗಿದೆ. ಮಡಿಕೇರಿ–ಮಂಗಳೂರು ರಾಷ್ಟ್ರೀಯ ಹೆದ್ದಾರಿಯು ಜೋಡುಪಾಲ ಎಂಬಲ್ಲಿ ಕುಸಿದಿದೆ. ಈ ಪ್ರದೇಶಕ್ಕೆ ಹೊಂದಿಕೊಂಡಿರುವ ಜಿಲ್ಲಾಧಿಕಾರಿ ಕಚೇರಿಗೂ ಅಪಾಯ ಎದುರಾಗಿದೆ.ತೀರ್ಥಹಳ್ಳಿ ತಾಲ್ಲೂಕು ಕೋಣಂದೂರು ಕುಕ್ಕೆ–ದತ್ತಾರಾಜಪುರ ರಸ್ತೆಯ ಎರಡು ಭಾಗಗಳಲ್ಲಿ ಭೂ ಕುಸಿತವಾಗಿದೆ. ಮಡಿಕೇರಿ–ಸಿದ್ದಾಪುರ ರಾಜ್ಯ ಹೆದ್ದಾರಿ ಕುಸಿದಿದೆ.ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯ ಹಲವೆಡೆಯೂ ರಸ್ತೆ ಕುಸಿತ ಉಂಟಾಗಿದೆ.

1 ಕಿ.ಮೀ. ಜಾರಿದ ಗುಡ್ಡ:ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಗ್ರಾಮ ನಗೆ ಎಂಬಲ್ಲಿ ಅಂದಾಜು ಆರು ಎಕರೆಗಳಷ್ಟು ವಿಸ್ತೀರ್ಣದಲ್ಲಿ ಗುಡ್ಡ ಕುಸಿದಿದೆ.

ನೂರಾರು ಮರಗಳು ಮಣ್ಣಿ ನೊಂದಿಗೆ ಸುಮಾರು ಒಂದು ಕಿಲೋಮೀಟರ್‌ನಷ್ಟು ದೂರಕ್ಕೆ ಜಾರಿವೆ.

ಪ್ರವಾಹದ ಅಬ್ಬರ: ರಾಜಾಪುರ ಬ್ಯಾರೇಜ್‌ ಮೂಲಕ 1,21,000 ಕ್ಯುಸೆಕ್ ಹಾಗೂ ದೂಧ್‌ಗಂಗಾ ನದಿಯ 30,800 ಕ್ಯುಸೆಕ್‌ ಸೇರಿ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ 1,51,800 ಕ್ಯುಸೆಕ್‌ ನೀರು ಸೇರಿಕೊಳ್ಳುತ್ತಿದೆ. ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯ ಕೇಶಿ, ವೇದ ಗಂಗಾ ನದಿಗಳಲ್ಲೂ ಒಳಹರಿವು ಏರಿಕೆ ಯಾಗಿದೆ. ಮಾರ್ಕಂಡೇಯ ನದಿಯ ಶಿರೂರು ಜಲಾಶಯ ಬಹುತೇಕ ಭರ್ತಿ ಯಾಗಿದೆ.

ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದ್ದು, ತಾಲ್ಲೂಕಿನ ನಡುಗಡ್ಡೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಶೀಲಹಳ್ಳಿ– ಹಂಚಿನಾಳ ಮಧ್ಯದ ಸೇತುವೆ ಶುಕ್ರವಾರ ಮುಳುಗಡೆ ಆಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಘಟಪ್ರಭಾ ಹಾಗೂ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.ಬಾದಾಮಿ ತಾಲ್ಲೂಕಿನ ಹೆಬ್ಬಳ್ಳಿ ಬಳಿ ಮಲಪ್ರಭಾ ನದಿಗೆ ಬೆಣ್ಣೆ ಹಳ್ಳದ ನೀರು ಸೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಜಮಖಂಡಿ ತಾಲ್ಲೂಕು ಹಿಪ್ಪರಗಿ ಜಲಾಶಯಕ್ಕೆ 1.47 ಲಕ್ಷ ಕ್ಯುಸೆಕ್ ಒಳ ಹರಿವು ಇದೆ. ಸಮೀಪದ ಮುತ್ತೂರು ಹಳೆಯ ಗ್ರಾಮ ನಡುಗಡ್ಡೆಯಾಗಿದೆ. ಮಾಚಕನೂರಿನ ಬಸವೇಶ್ವರ ದೇವಸ್ಥಾನ ಜಲಾವೃತ ಗೊಂಡಿದೆ.

ತಾವರಕೆರೆ ಬಳಿ ಹೆದ್ದಾರಿ ಮೇಲೆ ನೀರು ಬಂದಿದ್ದು, ಮಡಿಕೇರಿ– ಕುಶಾಲನಗರ ನಡುವೆ ವಾಹನ ಸಂಚಾರ ಬಂದ್‌ ಆಗಿದೆ.

ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ

ಭದ್ರಾ ಜಲಾಶಯಕ್ಕೆ 57 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಜಲಾಶಯದ ಮಟ್ಟ ಒಂದೇ ದಿನ 5 ಅಡಿ ಏರಿಕೆಯಾಗಿದೆ. 186 ಅಡಿ ಎತ್ತರದ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದ ಮಟ್ಟ 164.5ಕ್ಕೆ ತಲುಪಿದೆ.

ಕೆಆರ್‌ಎಸ್‌–ಎಚ್ಚರಿಕೆ

ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು ಶುಕ್ರವಾರ ಸಂಜೆಯ ಹೊತ್ತಿಗೆ ಜಲಾಶಯದಿಂದ 30 ಸಾವಿರ ಕ್ಯುಸೆಕ್ ನದಿಗೆ ಹರಿಸಲಾಗಿದೆ. ಈ ಕಾರಣ ಪ್ರವಾಹ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದ್ದು ನದಿ ತೀರದ ಜನರು ಎಚ್ಚರಿಕೆ ವಹಿಸಬೇಕು ಎಂದು ಕಾವೇರಿ ನೀರಾವರಿ ನಿಗಮ ತಿಳಿಸಿದೆ. ಶುಕ್ರವಾರ ಒಳಹರಿವಿನ ಪ್ರಮಾಣ 54 ಸಾವಿರ ಕ್ಯುಸೆಕ್‌ಗೆ ಹೆಚ್ಚಾಗಿದ್ದು, ನೀರಿನ ಮಟ್ಟ 115.35 ಅಡಿಗೆ ತಲುಪಿದೆ.‌ ಹಾರಂಗಿ ಜಲಾಶಯ ‌ಭರ್ತಿಯಾಗಿರುವುದರಿಂದ ಕಾವೇರಿ‌ ನದಿಯ ಹೊರ ಹರಿವು ಹೆಚ್ಚಳವಾಗಿದೆ.

ಅಪಾಯದಂಚಿನಲ್ಲಿ ಕಪಿಲಾ

ಕಬಿನಿ ಜಲಾಶಯದಿಂದ 70 ಸಾವಿರ ಕ್ಯುಸೆಕ್‌ನಷ್ಟು ನೀರನ್ನು ಹೊರಬಿಡುತ್ತಿರುವುದರಿಂದ ಕಪಿಲಾ ನದಿ ಅಪಾಯದಂಚಿನಲ್ಲಿ ಹರಿಯುತ್ತಿದೆ. ಮೈಸೂರು– ಸುತ್ತೂರು ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದೆ. ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಮಾದಾಪುರ ಸೇತುವೆ ಮುಳುಗಿದೆ. ತಾರಕ ಜಲಾಶಯ ಹಾಗೂ ನುಗು ಜಲಾಶಯ ಭರ್ತಿಯಾಗಿವೆ.

ತುಂಗಾ ಪ್ರವಾಹ: ತುಂಗಾ ಜಲಾಶಯಕ್ಕೆ 80 ಸಾವಿರ ಕ್ಯುಸೆಕ್‌ ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣ ನೀರು ಹೊರ ಬಿಡುತ್ತಿರುವ ಪರಿಣಾಮ ನದಿಯಲ್ಲಿ ಪ್ರವಾಹದ ಸನ್ನಿವೇಶ ನಿರ್ಮಾಣವಾಗಿದೆ.

ಚಾರ್ಮಾಡಿ ಮಾರ್ಗದ ರಸ್ತೆ ಬಿರುಕು ಬಿಟ್ಟಿರುವುದು

ಚಾರ್ಮಾಡಿ: 11ರವರೆಗೆ ಬಂದ್‌

ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಇದೇ 11ರವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ತಿಳಿಸಿದ್ದಾರೆ.

‘ಮಳೆಯಿಂದಾಗಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಾರ್ಯಾಚರಣೆಗಾಗಿ ನಾಲ್ಕು ದಿನ ವಾಹನ ಸಂಚಾರ ನಿರ್ಬಂಧಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಕರಾವಳಿ ಭಾಗಕ್ಕೆ ಮೂಡಿಗೆರೆ ಹ್ಯಾಂಡ್‌ಪೋಸ್ಟ್‌– ಜನ್ನಾಪುರ– ಆನೆಮಹಲ್‌– ಶಿರಾಡಿ– ಗುಂಡ್ಯ ಹೆದ್ದಾರಿ (ಎನ್‌ಎಚ್‌–75) ಮೂಲಕ ಸಂಚರಿಸಬಹುದು’ ಎಂದು ಸೂಚಿಸಿದ್ದಾರೆ.

ತಲಾ ₹ 5 ಕೋಟಿ ಅನುದಾನ

ಉಡುಪಿ: ಪ್ರಾಕೃತಿಕ ವಿಕೋಪ ಪರಿಹಾರ ಕಾಮಗಾರಿಗಳಿಗೆ ರಾಜ್ಯದ 11 ಜಿಲ್ಲೆಗಳಿಗೆ ತಲಾ ₹ 5 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ಶುಕ್ರವಾರ ಇಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT