ಬೆಂಗಳೂರು: ವಿವಿಧ ಮಸೂದೆಗಳ ಅಂಗೀಕಾರದ ನಡುವೆ ರಾಷ್ಟ್ರೀಯ ಶಿಕ್ಷಣ ನೀತಿ ಮೇಲಿನ ಚರ್ಚೆ ಮುಂದುವರಿದು ಕಲಾಪ ತಡರಾತ್ರಿ 12.35ರವರೆಗೂ ನಡೆಯಿತು.
ಗುರುವಾರ ಸಂಜೆ 4 35ರನಂತರ ಆರಂಭವಾದ ಕಲಾಪದಲ್ಲಿ ನಿಯಮ 330ರ ಅಡಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಚರ್ಚೆ ಆರಂಭವಾಗಿತ್ತು. ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ವಾಗ್ವಾದವೂ ನಡೆದಿತ್ತು.
ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸದನಕ್ಕೆ ಬಂದು ಕರ್ನಾಟಕ ಧನವಿನಿಯೋಗ ಮಸೂದೆ (ಪೂರಕ ಅಂದಾಜು) ಮಂಡಿಸಿ ಅನುಮೋದನೆ ಪಡೆದರು. ಬಳಿಕ ಇತರ ಮಸೂದೆಗಳನ್ನು ಸಚಿವರಾದ ಮಾಧುಸ್ವಾಮಿ, ಅರಗ ಜ್ಞಾನೇಂದ್ರ ಹಾಗೂ ಬಿ.ಸಿ. ನಾಗೇಶ್ ಮಂಡಿಸಿ, ಅನುಮೋದನೆ ಪಡೆದರು.
ಈ ವೇಳೆ ಅರ್ಧಕ್ಕೆ ನಿಂತಿದ್ದ ಎನ್ಇಪಿ ಮೇಲಿನ ಚರ್ಚೆ ಪುನಃ ಮುಂದುವರಿದೆ. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಸದಸ್ಯರ ಪ್ರಶ್ನೆ ಸಂಶಯಗಳಿಗೆ ಉತ್ತರಿಸಿದರು.
ನಂತರ ಸದಸ್ಯರು ಮತ್ತಷ್ಟು ಸ್ಪಷ್ಟೀಕರಣ ಕೋರಿದರು. ಹೀಗೆ ಮಧ್ಯರಾತ್ರಿ 12.35ರ ವರೆಗೂ ಕಲಾಪ ನಡೆದಿದ್ದು, ನಂತರ ಸಭಾಪತಿಯವರ ಸೂಚನೆಯಂತೆ ಚರ್ಚೆಯನ್ನು ಪೂರ್ಣಗೊಳಿಸಲಾಯಿತು. ಕಲಾಪವನ್ನು ಶುಕ್ರವಾರ ಬೆಳಿಗೆ 10 ಗಂಟೆಗೆ ಮುಂದೂಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.