ಮೈಸೂರು: ‘ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬೇಕು. ಅವರು ಕೂಡಲೇ ಹಸಿರು ಟವೆಲ್ ತೆಗೆಯಬೇಕು. ಇಲ್ಲದಿದ್ದರೆ ರೈತರೇ ತೆಗೆಯುತ್ತಾರೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ಕೊಟ್ಟರು.
‘ಚಂದ್ರಶೇಖರ್ ವಿರುದ್ಧದ ಆರೋಪಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಮೇ 28ರಂದು ಎಲ್ಲ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಿ, ರಾಜ್ಯಪಾಲರಿಗೆ ಒತ್ತಾಯಪತ್ರ ಸಲ್ಲಿಸಲಾಗುವುದು’ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಅವರ ವಿರುದ್ಧ ಕೇಳಿ ಬಂದಿರುವ ಆರೋಪಗಳಿಂದ ರೈತ ಸಮುದಾಯಕ್ಕೆ ಅವಮಾನವಾಗಿದೆ. ಹಸಿರು ಟವೆಲ್ ಹಾಕಿದ ಎಲ್ಲರನ್ನೂ ಅನುಮಾನದಿಂದ ನೋಡುವ ಹಾಗಾಗಿದೆ. ಅವರು ಈ ರೀತಿ ಎಂದು ಗೊತ್ತಿದ್ದರಿಂದಲೇ ನಮ್ಮ ಸಂಘಟನೆಯಿಂದ ದೂರ ಇಟ್ಟಿದ್ದೆವು’ ಎಂದು ಹೇಳಿದರು.
‘ಕೋಡಿಹಳ್ಳಿ ನಿಜ ಸ್ವರೂಪ ಬಯಲಾಗಿದ್ದು, ಅವರೊಂದಿಗೆ ಇರುವ ಪ್ರಾಮಾಣಿಕರು ನಮ್ಮ ಸಂಘಟನೆ ಸೇರುವಂತೆ ಆಹ್ವಾನಿಸುತ್ತೇವೆ.ಅವರನ್ನು ನಂಬಿ ಕೆಎಸ್ಆರ್ಟಿಸಿಯ ಮುಗ್ಧ ನೌಕರರು ಬಲಿಯಾಗಿದ್ದಾರೆ. ಹಲವು ಮಂದಿ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.