ಮಂಗಳೂರು: ಇಲ್ಲಿಗೆ ಸಮೀಪದ ಕುಡುಪು ಶ್ರೀ ಅನಂತಪದ್ಮನಾಭದೇವಸ್ಥಾನಕ್ಕೆ ಬಾಳೆಹಣ್ಣು ಪೂರೈಸುವ ವಾರ್ಷಿಕ ಗುತ್ತಿಗೆಯನ್ನು ಅನ್ಯಧರ್ಮೀಯ ವ್ಯಾಪಾರಿಗಳಿಗೆ ನೀಡದಿರಲು ಆಡಳಿತ ಮಂಡಳಿಯು ಮುಂದಾಗಿದೆ.
2021–22ನೇ ಸಾಲಿನಲ್ಲಿ ದೇವಸ್ಥಾನಕ್ಕೆ ಬಾಳೆಹಣ್ಣು ಪೂರೈಸುವ ಗುತ್ತಿಗೆಯನ್ನು ಮುಸ್ಲಿಂ ವ್ಯಾಪಾರಿಗೆ ನೀಡಿದ್ದಕ್ಕೆ ಧಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳು ಹರಿದಾಡುತ್ತಿದ್ದವು.
ಕೆಲವರು ದೇವಸ್ಥಾನದ ಕಚೇರಿ ಕರೆ ಮಾಡಿ ಸಿಬ್ಬಂದಿಗೂ ಕಿರಿಕಿರಿ ಉಂಟು ಮಾಡುತ್ತಿದ್ದರು. ಇದರಿಂದ ಬೇಸತ್ತ ದೇವಸ್ಥಾನದ ಆಡಳಿತ ಮಂಡಳಿ 2022–23ನೇ ಸಾಲಿಗೆ ಬಾಳೆ ಹಣ್ಣು ಹಾಗೂ ಇತರ ಸಾಮಗ್ರಿ ಪೂರೈಕೆಯ ಗುತ್ತಿಗೆಯನ್ನು ಹಿಂದೂಗಳಲ್ಲದ ವ್ಯಾಪಾರಿಗಳಿಗೆ ನೀಡದಿರುವ ನಿರ್ಧಾರಕ್ಕೆ ಬಂದಿದೆ.
‘ದರಪಟ್ಟಿ ಆಹ್ವಾನಿಸಲು ನೀಡಿದ ಜಾಹೀರಾತಿನಲ್ಲಿ ಈ ಬಗ್ಗೆ ಉಲ್ಲೇಖಿಸಿಲ್ಲ. ಈ ಬಗ್ಗೆ ವ್ಯಾಪಾರಿಗಳಿಗೆ ಮೌಖಿಕವಾಗಿ ತಿಳಿಸಿದ್ದೇವೆ ಅಷ್ಟೇ’ ಎಂದು ದೇವಸ್ಥಾನದ ಮೂಲಗಳು ಹೇಳಿವೆ.