ಬೆಂಗಳೂರು:‘ದೇಶದ ಭಾಷಾ ವೈವಿಧ್ಯದ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬದ್ಧವಾಗಿದೆ’ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿದ್ದ ‘ಭಾಷಾ ಭಾರತ–ಬಲಿಷ್ಠ ಭಾರತ’ ರಾಷ್ಟ್ರಮಟ್ಟದ ಭಾರತೀಯ ಭಾಷೆಗಳ ದುಂಡುಮೇಜಿನ ಪರಿಷತ್ ಅನ್ನು ಆನ್ಲೈನ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
‘ಕೇಂದ್ರ ಸರ್ಕಾರ ಭಾಷಾ ವೈವಿಧ್ಯವನ್ನು ಗೌರವಿಸುತ್ತದೆ. ಈ ದೃಷ್ಟಿಕೋನದಲ್ಲೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದೆ. ನೀಟ್ ಹಾಗೂ ಜೆಇಇ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮಾತೃಭಾಷೆಯಲ್ಲಿಯೇ ಬರೆಯಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ’ ಎಂದರು.
‘ಈ ಬಜೆಟ್ನಲ್ಲಿಭಾರತೀಯ ಭಾಷಾ ಅನುವಾದ ಯೋಜನೆಗಳಿಗಾಗಿ ಅನುದಾನ ನೀಡಲಾಗಿದೆ. ವೈದ್ಯಕೀಯ ಶಾಸ್ತ್ರ ಸೇರಿದಂತೆ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳು ಎಲ್ಲ ಭಾಷೆಗಳಲ್ಲಿ ಲಭ್ಯವಾಗುವ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.