ಉಡುಪಿ: ಬ್ರಹ್ಮಾವರ ತಾಲ್ಲೂಕಿನ ನೈಲಾಡಿ ಬಳಿ ಭಾನುವಾರ ಬೆಳಗಿನ ಜಾವ ಆಹಾರ ಹುಡುಕಿಬಂದಿದ್ದ ಚಿರತೆ ಕೆಲಕಾಲ ಮನೆಯ ಕೋಣೆಯೊಳಗೆ ಬಂಧಿಯಾಗಿತ್ತು.
ಸುದ್ದಿತಿಳಿದ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಒಂದೂವರೆ ಗಂಟೆಯ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿದರು. ಚಿರತೆ ಕಾರ್ಯಾಚರಣೆ ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದರು.
ಚಿರತೆ ಬಂಧಿಯಾಗಿದ್ದು ಹೇಗೆ?
ಚಿರತೆ ಮೊದಲು ಮನೆಯ ಮುಂದೆ ಕಟ್ಟಿದ್ದ ನಾಯಿ ಮೇಲೆ ದಾಳಿ ಮಾಡಿದೆ. ಬೆದರಿದ ನಾಯಿ ಮನೆಯ ಕೋಣೆಯೊಳಗೆ ನುಗ್ಗಿದಾಗ ಬೆನ್ನಟ್ಟಿದ ಚಿರತೆಯೂ ಕೋಣೆ ಸೇರಿದೆ.
ಸದ್ದು ಕೇಳಿ ಎಚ್ಚರಗೊಂಡ ಮನೆಯವರು ಕೋಣೆ ಪ್ರವೇಶಿದಾಗ ಚಿರತೆ ಇದ್ದದ್ದನ್ನು ಕಂಡು ಬಾಗಿಲು ಹಾಕಿಕೊಂಡಿದ್ದಾರೆ.
ಚಿರತೆ ಸೆರೆ ಬಳಿಕ ಸಮೀಪದ ಸೈಬರ್ಕಟ್ಟೆ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ಮೀಸಲು ಅರಣ್ಯದಲ್ಲಿ ಸುರಕ್ಷಿತವಾಗಿ ಬಿಡಲಾಯಿತು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ, ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ನಾಯ್ಕ್, ಸಿಬ್ಬಂದಿ ರವಿ, ರವೀಂದ್ರ, ಸಂತೋಷ್ ಜೋಗಿ, ವಿಠಲ್ ನಾಯ್ಕ್, ಲಕ್ಷ್ಮಣ, ಶಿವು, ಸುದೀಪ್ ಶೆಟ್ಟಿ ಭಾಗಿಯಾಗಿದ್ದರು.