ಎಂಇಜಿ ಯುದ್ಧ ಸ್ಮಾರಕದಲ್ಲಿಕಮಾಂಡಂಟ್ ಬ್ರಿಗೇಡಿಯರ್ ಶಲಭ್ ಗುಪ್ತಾ ಅವರು ಹುತಾತ್ಮ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ನಿವೃತ್ತ ಕ್ಯಾಪ್ಟನ್ ಗೋವಿಂದಸ್ವಾಮಿ ಅವರ ಪುತ್ಥಳಿಯನ್ನು ’ಎಂಇಜಿ ಡ್ರಿಲ್ ಸ್ಕ್ವೇರ್’ ಮೈದಾನದಲ್ಲಿ ಸ್ವತಃ ಅವರೇ ಅನಾವರಣಗೊಳಿಸಿದ್ದು ಈ ಬಾರಿಯ ವಿಶೇಷವಾಗಿತ್ತು. ಯೋಧರನ್ನು ಪಥಸಂಚಲನಕ್ಕೆ ಸಜ್ಜುಗೊಳಿಸುವಲ್ಲಿ ಗೋವಿಂದಸ್ವಾಮಿ ಖ್ಯಾತಿ ಪಡೆದಿದ್ದಾರೆ.ಗೋವಿಂದಸ್ವಾಮಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಎಂಇಜಿ ಯೋಧರು, ಗಣರಾಜ್ಯೋತ್ಸವ ಪರೇಡ್ನಲ್ಲಿ ಇದುವರೆಗೆ ಒಂಬತ್ತು ಬಾರಿ ಪದಕ ಪಡೆದಿದ್ದಾರೆ.
ಎಂಇಜಿ, ಭಾರತೀಯ ಸೇನೆಯ ‘ಕಾರ್ಪ್ಸ್ ಆಫ್ ಎಂಜಿನಿಯರ್’ನ ಘಟಕವಾಗಿದೆ. ಮೂರು ‘ಕಾರ್ಪ್ಸ್ ಆಫ್ ಎಂಜಿನಿಯರ್’ಗಳಲ್ಲೇ ಇದು ಅತ್ಯಂತ ಹಳೆಯದಾಗಿದೆ. ಎಂಇಜಿಯನ್ನು ಅನೌಪಚಾರಿಕವಾಗಿ ‘ಮದ್ರಾಸ್ ಸ್ಯಾಪರ್ಸ್’ ಎಂದು ಸಹ ಕರೆಯಲಾಗುತ್ತದೆ. 1780ರ ಸೆಪ್ಟೆಂಬರ್ 30ರಂದು ಎಂಇಜಿ ಸ್ಥಾಪಿಸಲಾಗಿತ್ತು. ಈ 242 ವರ್ಷಗಳಲ್ಲಿ ಜಗತ್ತಿನಾದ್ಯಂತ ನಡೆದ ಹಲವು ಯುದ್ಧಗಳಲ್ಲಿ ಎಂಇಜಿ ಯೋಧರು ಭಾಗವಹಿಸಿದ್ದಾರೆ.
ಕ್ರೀಡೆಯಲ್ಲೂ ಎಂಇಜಿ ಯೋಧರು ಅತ್ಯುತ್ತಮ ಸಾಧನೆ ತೋರಿದ್ದು, ಹಲವರು ಪದ್ಮಶ್ರೀ, ಅರ್ಜುನ, ದ್ರೋಣಾಚಾರ್ಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.