ಬೆಂಗಳೂರು: ಆರ್ಥಿಕ ಇಲಾಖೆಯು 5,300 ಮಂದಿ ಪೌರ ಕಾರ್ಮಿಕರ ಹುದ್ದೆಗಳ ಭರ್ತಿಗೆ ಅನುಮತಿ ನೀಡಿದ್ದು, ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೇರ ಪಾವತಿ ವೇತನ ಪಡೆ ಯುತ್ತಿರುವ ಪೌರ ಕಾರ್ಮಿಕರ ಸೇವೆಯನ್ನು 3 ವರ್ಷಗಳಲ್ಲಿ ಹಂತ ಹಂತವಾಗಿ ಕಾಯಂಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಿಧಾನಸೌಧದಲ್ಲಿ ಮಂಗಳವಾರ ತಿಳಿಸಿದರು.
ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತ ನಾಡಿದ ಅವರು,ಸರ್ಕಾರ ಪೌರ ಕಾರ್ಮಿಕರ ಪರ ಸಹಾನುಭೂತಿ ಹೊಂದಿದೆ. ಬೇಡಿಕೆಗಳನ್ನು ಈಡೇ ರಿಸಲು ಬದ್ಧವಾಗಿದೆ. ಕಾರ್ಮಿಕ ಸಂಘಟನೆಗಳು ಜುಲೈ 1ರಿಂದ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಬಿಡಬೇಕು ಎಂದೂ ಮನವಿ ಮಾಡಿದರು.
ಪ್ರಸ್ತುತ ಜಾರಿಯಲ್ಲಿರುವ ಆರೋಗ್ಯ ವಿಮೆ ಸೌಲಭ್ಯವನ್ನು ಎಲ್ಲ ಪೌರ ಕಾರ್ಮಿಕರು ಮತ್ತು ಸ್ವಚ್ಛತಾ ನೌಕರರಿಗೂ ಅನ್ವಯವಾಗುವಂತೆ ವಿಸ್ತರಿಸುವ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
2018ರಲ್ಲಿ ರಚಿಸಲಾದ ಪೌರ ಕಾರ್ಮಿಕರ ನೇಮಕಾತಿ ವಿಶೇಷ ನಿಯಮಾವಳಿಗಳ ಮರುಪರಿಶೀಲನೆಗೆ ಅನುಕೂಲವಾಗುವಂತೆ ಈಗಾಗಲೇ ಕರ್ತವ್ಯ ದಲ್ಲಿರುವ ಪೌರ ಕಾರ್ಮಿಕರು ಮತ್ತು ಸ್ವಚ್ಛತಾ ಕಾರ್ಮಿಕರ ಸೇವಾ ವಿವರಗಳನ್ನು ಒಂದು ವಾರದ ಒಳಗೆ ಸಂಗ್ರಹಿಸಿ ಅಗತ್ಯ ಶಿಫಾರಸುಗಳೊಂದಿಗೆ ಕಡತ ಮಂಡಿಸಲು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
‘ಚುನಾವಣೆಗೆ ಮುನ್ನ ಸಿ.ಡಿ ಬರಲಿವೆ’
ಬಾಗಲಕೋಟೆ: ‘ವಿಧಾನಸಭೆ ಚುನಾವಣೆಗೆ ಮುನ್ನ ಕೆಲವು ಸಚಿವರ ಸಿ.ಡಿಗಳು ಹೊರಬರಲಿವೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂಮಂಗಳವಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘12 ಮಂದಿ ಸಚಿವರು, ಸಂಸದ ಸದಾನಂದಗೌಡ ಸಿ.ಡಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದಾರೆ. ಆದರೆ, ಮಾನವಂತರಂತೆ ಮಾತನಾಡುತ್ತಾರೆ’ ಎಂದು ಟೀಕಿಸಿದರು.
‘ಹಿಂದೆ ರಾಜ್ಯದಲ್ಲಿ ಒಬ್ಬ ಶಾಸಕರಿಗೆ ₹ 30 ಕೋಟಿ, ಒಂದು ಮಂಚ ನೀಡಿದ್ರು. ಮಹಾರಾಷ್ಟ್ರದಲ್ಲಿಯೂ ಈಗ ಅದೇ ನಡೆದಿದೆ’ ಎಂದು ಅವರು ಆರೋಪಿಸಿದರು.
‘ಕಾಂಗ್ರೆಸ್, ಬಿಜೆಪಿಯ ಹಲವರು ನಾಯಕರು ಜುಲೈ ಅಂತ್ಯಕ್ಕೆ ಜೆಡಿಎಸ್ಗೆ ಸೇರುವರು’ ಎಂದರು.
ಯಾರು ಸೇರುತ್ತಾರೆ ಎಂಬ ಪ್ರಶ್ನೆಗೆ ‘ತಾಳಿಕಟ್ಟದೇ ಹೆಂಡತಿ ಹೆಸರು ಹೇಳಲು ಆಗುವುದಿಲ್ಲ. ಮದುವೆಗೆ ಮಾತುಕತೆ ನಡೆದಿದೆ. ಮಂಟಪ ಸಿದ್ಧವಾಗುತ್ತಿದೆ. ಕಿತ್ತೂರು ಕರ್ನಾಟಕ ಭಾಗದ 15ಕ್ಕೂ ಹೆಚ್ಚು ನಾಯಕರು ಬರಲಿದ್ದಾರೆ’ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.