ವಿಜಯಪುರ: ಕರ್ನಾಟಕದಲ್ಲಿ ಸದ್ಯ ಇರುವುದು ಬಿಜೆಪಿ ಸರ್ಕಾರವಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸರ್ಕಾರವಲ್ಲ. ಇಲ್ಲಿ ಅಪ್ಪ–ಮಕ್ಕಳ ಕುಟುಂಬ ಸರ್ಕಾರ ಇದೆ. ಇದು ಆದಷ್ಟು ಬೇಗ ತೊಲಗಬೇಕು. ರಾಜ್ಯಕ್ಕೆ ಒಳ್ಳೆಯ ಮುಖ್ಯಮಂತ್ರಿ ಬರಬೇಕು ಎಂದುಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 2 ಒಳಗಾಗಿ ಯಡಿಯೂರಪ್ಪನವರನ್ನು ಬದಲಾಯಿಸದಿದ್ದರೆದೊಡ್ಡ ಸ್ಫೋಟ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ಅರುಣ್ ಸಿಂಗ್ ವಿರುದ್ಧ ಗುಡುಗು
ಅರುಣ್ ಸಿಂಗ್ ಅವರಿಗೆ ರಾಜ್ಯ ಉಸ್ತುವಾರಿ ನೀಡಲಾಗಿದೆಯೇ ಹೊರತು, ಯಡಿಯೂರಪ್ಪನವರಿಗೆ, ಅವರ ಮಗನಿಗೆ ಶಹಾಬಾಷ್ ಗಿರಿ ಕೊಡಲು ಅಲ್ಲ? ನೀವು ಬಿಜೆಪಿ ಪರವಾಗಿದ್ದೀರೋ ಅಥವಾ ಯಡಿಯೂರಪ್ಪನವರ ಪರವಾಗಿದ್ದರೊ ಎಂಬುದನ್ನು ಮೊದಲು ಸ್ಪಷ್ಟಪಡಿಸಿ ಎಂದು ಅರುಣ್ ಸಿಂಗ್ ಅವರನ್ನು ಎಂದು ಪ್ರಶ್ನಿಸಿದರು.
‘ಯಾವ ಸಚಿವರಿಗೂ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಬಿಡುತ್ತಿಲ್ಲ. ಅಪ್ಪ–ಮಗ ನೇರವಾಗಿ ಎಲ್ಲ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಹಾಗಾದರೆಸಚಿವ ಸಂಪುಟ ಏಕೆ ಬೇಕು? ಸಚಿವರು ಏಕೆ ಬೇಕು?ಎಲ್ಲ ಇಲಾಖೆಗಳನ್ನು ಸೇರಿಸಿ ವಿಜಯೇಂದ್ರ ಒಬ್ಬನನ್ನೇ ಸಚಿವನನ್ನಾಗಿ ಮಾಡಲಿ. ಮುಖ್ಯಮಂತ್ರಿನೂ ಆತನೇ ಆಗಲಿ’ ಎಂದು ಹೇಳಿದರು.
ಸಿಎಂಗೆ ₹ 200 ಕೋಟಿ ಮೊತ್ತದ ಮನೆ ಗಿಫ್ಟ್
‘ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅವರ ಬೀಗ, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮರಿಸ್ವಾಮಿ ₹200 ಕೋಟಿ ಮೊತ್ತದ ಮನೆಯನ್ನು ಗಿಫ್ಟ್ ನೀಡಿದ್ದಾರೆ’ ಎಂದು ಆರೋಪಿಸಿದರು.
ಆಸೆ ಹುಟ್ಟಿಸಿದ್ದಾರೆ
‘ನನ್ನ ನಂತರ ನೀವೇ ಮುಖ್ಯಮಂತ್ರಿ ಎಂದು ನಾಲ್ಕೈದು ಜನಕ್ಕೆ ಆಸೆ ಹುಟ್ಟಿಸಿದ್ದಾರೆ. ಹೀಗಾಗಿ ಅವರು ಯಡಿಯೂರಪ್ಪನವರನ್ನ ತಂದೆ, ತಾಯಿ ಎಂದು ಹೇಳಿಕೊಂಡು ಅವರ ಹಿಂದೆ ಅಡ್ಡಾಡತೊಡಗಿದ್ದಾರೆ. ಈ ನಾಲ್ಕು ಮಂದಿಗಾಗಿ ರಾಜ್ಯದಲ್ಲಿ ಬಿಜೆಪಿಯನ್ನು ಬಲಿಕೊಡಲು ಆಗುವುದಿಲ್ಲ’ ಎಂದರು.
‘ರಾಜ್ಯದಲ್ಲಿ ಬಿಜೆಪಿ ಸರ್ಕಾರವಿಲ್ಲ. ಬದಲಿಗೆಯಡಿಯೂರಪ್ಪ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ವಿಜಯೇಂದ್ರ ನೇತೃತ್ವದ ಸರ್ಕಾರ ರಾಜ್ಯದಲ್ಲಿದೆ. ಇವರು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಸಿಡಿ ಪ್ರಕರಣದ ಹೆಸರಲ್ಲಿ ಸದನ ನಡೆಯದಂತೆ ಮಾಡಿದ್ದಾರೆ’ ಎಂದು ಆರೋಪಿಸಿದರು.