ಹುಬ್ಬಳ್ಳಿ: ಚಿಕ್ಕಮಕ್ಕಳನ್ನು ನ್ಯುಮೋಕಾಕಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ನ್ಯುಮೋನಿಯಾ ಮತ್ತು ಮೆನಿಂಜೈಟಿಸ್ ಕಾಯಿಲೆಗಳಿಂದ ರಕ್ಷಿಸಲು ರಾಜ್ಯ ಸರ್ಕಾರ ರಾಜ್ಯದಾದ್ಯಂತ ಶುಕ್ರವಾರದಿಂದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ನ್ಯೂಮೋಕಾಕಲ್ ಕಾಂಜುಕೇಟ್ ಲಸಿಕೆ (ಪಿಸಿವಿ) ನೀಡುವುದನ್ನು ಆರಂಭಿಸಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಭಾರತ ಒಂಬತ್ತು ತಿಂಗಳ ಅವಧಿಯಲ್ಲಿ 100 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿದ ಹಿನ್ನೆಲೆಯಲ್ಲಿ ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್)ಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಐದು ವರ್ಷದೊಳಗಿನ ಮಕ್ಕಳಲ್ಲಿ ಉಂಟಾಗುವ ನ್ಯುಮೋನಿಯಾಕ್ಕೆ ನ್ಯೂಮೋಕಾಕಸ್ ಬ್ಯಾಕ್ಟೀರಿಯಾ ಪ್ರಮುಖ ಕಾರಣವಾಗಿದೆ. ಆದ್ದರಿಂದ ಮಗು ಒಂದೂವರೆ, ಮೂರೂವರೆ ಮತ್ತು ಒಂಬತ್ತು ತಿಂಗಳಲ್ಲಿದ್ದಾಗ ಪಿವಿಸಿ ಲಸಿಕೆಯ ಮೂರೂ ಡೋಸ್ಗಳನ್ನು ಹಾಕಿಸಬೇಕು’ ಎಂದರು.
ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಪಿಸಿವಿ ಉಚಿತವಾಗಿ ನೀಡಲಾಗುತ್ತಿದೆ. ಪೋಷಕರು ಜವಾಬ್ದಾರಿಯಿಂದ ತಮ್ಮ ಚಿಕ್ಕಮಕ್ಕಳಿಗೆ ಈ ಲಸಿಕೆ ಹಾಕಿಸಬೇಕು ಎಂದು ಕೋರಿದರು.
ಹುಬ್ಬಳ್ಳಿಯ ಕಿಮ್ಸ್ನಲ್ಲಿ ಶುಕ್ರವಾರ ಪಿಸಿವಿ ಲಸಿಕೆಯನ್ನು ಮಗುವಿಗೆ ಹಾಕುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೈ ಜೋಡಿಸಿದರು
ಆರೋಗ್ಯ ಸಚಿವ ಕೆ. ಸುಧಾಕರ್ ಮಾತನಾಡಿ ‘100 ಕೋಟಿ ಡೋಸ್ ಲಸಿಕೆ ನೀಡಿದ ಸಾಧನೆ ಮಾಡಿದ ಮೊದಲ ರಾಷ್ಟ್ರ ಭಾರತ. ಇದರ ಜೊತೆಗೆ ಪಿಸಿವಿಯನ್ನು ಇಂದಿನಿಂದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಸೇರ್ಪಡೆ ಮಾಡಲಾಗಿದೆ’ ಎಂದರು.