ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಉದ್ಯಮಶೀಲತೆಯಿಂದ 15 ಕೋಟಿ ಉದ್ಯೋಗ ಸೃಷ್ಟಿ ಸಾಧ್ಯ: ಮೀನಾ ಗಣೇಶ್

ಬೆಂಗಳೂರು ತಂತ್ರಜ್ಞಾನ ಶೃಂಗ
Last Updated 17 ನವೆಂಬರ್ 2021, 15:51 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯರು ಪ್ರತಿಭೆ ಮತ್ತು ಸಾಮರ್ಥ್ಯಗಳಲ್ಲಿ ಪುರುಷರಿಗೆ ಸರಿಸಮನಾಗಿದ್ದು, 2 ಮತ್ತು 3ನೇ ಹಂತದ ನಗರಗಳಲ್ಲಿ ಉದ್ಯಮಶೀಲತೆಗೆ ಅಪಾರ ಅವಕಾಶಗಳಿವೆ. ಮಹಿಳಾ ಸಮೂಹವನ್ನು ಸಕಾರಾತ್ಮಕವಾಗಿ ಬಿಂಬಿಸಿದರೆ ದೇಶದಲ್ಲಿ 15 ಕೋಟಿ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಪೋರ್ಟಿಯಾ ಮೆಡಿಕಲ್ ಕಂಪನಿಯ ಸಹ-ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಮೀನಾ ಗಣೇಶ್ ಹೇಳಿದ್ದಾರೆ.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಮೊದಲ ದಿನವಾದ ಬುಧವಾರ ನಡೆದ ‘ಮಹಿಳಾ ಉದ್ಯಮಶೀಲತೆ: ಸವಾಲುಗಳು ಮತ್ತು ಪರಿಹಾರಗಳು’ ವಿಚಾರಗೋಷ್ಠಿಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಿಳೆಯರ ದೃಷ್ಟಿಯಿಂದ ಹೇಳುವುದಾದರೆ ಕಳೆದ 20 ವರ್ಷಗಳಲ್ಲಿ ಪರಿಸ್ಥಿತಿ ಸಾಕಷ್ಟು ಸಕಾರಾತ್ಮಕವಾಗಿ ಬದಲಾಗಿದೆ. ಆದ್ದರಿಂದ ಹೆಣ್ಣು ಮಕ್ಕಳನ್ನು ಕೆಲವೇ ಉದ್ಯೋಗಗಳಿಗೆ ಸೀಮಿತಗೊಳಿಸಬಾರದು. ಕರ್ನಾಟಕದಲ್ಲಂತೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೇರಳ ಅವಕಾಶಗಳಿದ್ದು, ಮಹಿಳಾ ಸಾಹಸಿಗಳಿಗೆ ಅಗತ್ಯ ಬಂಡವಾಳ ವ್ಯವಸ್ಥೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಉದ್ಯಮಶೀಲತೆ ಬೆಳೆಯಬೇಕಾದರೆ ನಾವು ಹೆಚ್ಚು ರೋಲ್ ಮಾಡೆಲ್‌ಗಳನ್ನು ಬಿಂಬಿಸಬೇಕು. ಜೊತೆಗೆ ಶಿಕ್ಷಣ ಕ್ರಮದಲ್ಲಿ ಪದವಿ ಮಟ್ಟದಲ್ಲಾದರೂ ಉದ್ಯಮಶೀಲತೆಯ ಬಗ್ಗೆ ಅರಿವು ಮೂಡಿಸಬೇಕು. ಇದರಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಬಲು ದೊಡ್ಡ ಶಕ್ತಿ ಬರುತ್ತದೆ ಎಂದು ಮೀನಾ ಸಲಹೆ ನೀಡಿದರು.

ಷುಗರ್ ಕಾಸ್ಮೆಟಿಕ್ಸ್ ಕಂಪನಿಯ ಸಹಸಂಸ್ಥಾಪಕಿ ಮತ್ತು ಸಿಇಒ ಸಾಕ್ಷಿ ಚೋಪ್ರಾ ಮಾತನಾಡಿ, ಕಂಪನಿಗಳಲ್ಲಿ ಮಹಿಳೆಯರಿಗೆ ಉನ್ನತ ಮಟ್ಟದಲ್ಲಿ ಅಧಿಕಾರ ಮತ್ತು ನಿರ್ಧಾರವನ್ನು ತೆಗೆದುಕೊಳ್ಳುವ ಅವಕಾಶಗಳು ಹೆಚ್ಚುಹೆಚ್ಚು ಸಿಗಬೇಕು. ಹೀಗಾದರೆ, ಬಂಡವಾಳ ಕ್ರೋಡೀಕರಿಸಲು ಸುಲಭವಾಗುತ್ತದೆ ಎಂದರು.

ಉದ್ಯಮಶೀಲತೆ ಎಂದರೆ ಕೇವಲ ದೊಡ್ಡ ನಗರಗಳತ್ತ ನೋಡುವುದೆಂದು ಅರ್ಥವಲ್ಲ. ಇಲ್ಲಿನ ಸಣ್ಣಪುಟ್ಟ ಪೇಟೆ-ಪಟ್ಟಣಗಳು ನಿಜಕ್ಕೂ ಭಾರತದ ಹೃದಯದಂತಿವೆ. ಇಲ್ಲಿರುವ ಉಜ್ವಲ ಅವಕಾಶಗಳನ್ನು ಉದ್ಯಮಶೀಲ ಮಹಿಳೆಯರು ಬಳಸಿಕೊಳ್ಳಬೇಕು. ಇದರಿಂದ ನಷ್ಟದ ಸಂಭವನೀಯತೆ ತಾನಾಗಿಯೇ ನಗಣ್ಯವಾಗುತ್ತದೆ ಎಂದು ಅವರು ಕಿವಿಮಾತು ನುಡಿದರು.

ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಸಿಕೋಯಿಯಾ ಕ್ಯಾಪಿಟಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ವಿನೀತಾ ಸಿಂಗ್, ಮಹಿಳೆಯರು ಎಲ್ಲ ಸಮಸ್ಯೆಗಳನ್ನೂ ಲಿಂಗ ತಾರತಮ್ಯಕ್ಕೆ ತಳುಕು ಹಾಕಬಾರದು. ದೇಶದಲ್ಲಿ ಈಗ ಲಿಂಗ ಸಮಾನತೆ ವ್ಯಾಪಕವಾಗಿ ಕಂಡುಬರುತ್ತಿದೆ. ಕಳೆದ 5-6 ವರ್ಷಗಳಿಂದ ಮಹಿಳೆಯರು ದೊಡ್ಡ ಗ್ರಾಹಕ ಶಕ್ತಿಯಾಗಿ ಹೊರಹೊಮ್ಮಿದ್ದು, ಇದು ಸ್ತ್ರೀ ಸಮೂಹಕ್ಕೆ ವರದಾನವಾಗಿದೆ. ಕೋವಿಡ್ ನಂತರದ ಸಂದರ್ಭವಂತೂ ಮಹಿಳೆಯರಿಗೆ ಸದವಕಾಶ ಸೃಷ್ಟಿಸಿದೆ ಎನ್ನುವ ಮೂಲಕ ಗಮನ ಸೆಳೆದರು.

ಮಹಿಳಾ ಉದ್ಯಮಿಗಳು ಒಳ್ಳೆಯ ತಂಡ ಕಟ್ಟುವುದಕ್ಕೆ ಮತ್ತು ಪ್ರತಿಭಾವಂತ ಅನುಭವಿಗಳ ನೇಮಕಕ್ಕೆ ಒತ್ತು ಕೊಡಬೇಕು. ಇದರ ಜತೆಗೆ ಬಂಡವಾಳ ಕ್ರೋಡೀಕರಣವನ್ನು ಸರಕಾರ ಮತ್ತು ಖಾಸಗಿ ವಲಯದ ಉದ್ದಿಮೆಗಳು ಸುಲಭಗೊಳಿಸಬೇಕು ಎಂದು ನುಡಿದರು. ಹಿರಿಯ ಪತ್ರಕರ್ತೆ, ಎಕನಾಮಿಕ್ಸ್ ಟೈಮ್ಸ್ ಪತ್ರಿಕೆಯ ದಕ್ಷಿಣ ಭಾರತದ ಸಂಪಾದಕಿ ಅರ್ಚನಾ ರೈ ಸಂವಾದವನ್ನು ನಡೆಸಿಕೊಟ್ಟರು.

*
21 ವರ್ಷಗಳ ಹಿಂದೆ ನಾನು ಉದ್ಯಮಿಯಾಗಲು ಹೊರಟಾಗ ಸಮಾಜ ಸಾಂಪ್ರದಾಯಿಕವಾಗಿತ್ತು. ಆದರೆ ಈಗ ಸಾಕಷ್ಟು ಸುಧಾರಿಸಿದೆ. ಆದ್ದರಿಂದ ಕುಟುಂಬದ ಸದಸ್ಯರು ತಮ್ಮ ಹೆಣ್ಣು ಮಕ್ಕಳನ್ನು ಉದ್ಯಮರಂಗಕ್ಕೆ ಧುಮುಕಲು ಪ್ರೋತ್ಸಾಹಿಸಬೇಕು.
-ಮೀನಾ ಗಣೇಶ್, ಪೋರ್ಟಿಯಾ ಮೆಡಿಕಲ್

*
ಮಹಿಳೆಯರಿಗೆ ಉದ್ಯೋಗದ ಸ್ಥಳಕ್ಕಿಂತಲೂ ಕುಟುಂಬದಲ್ಲಿ ತುಂಬಾ ಕಷ್ಟವಾಗುತ್ತದೆ. ಆದ್ದರಿಂದ ವೇತನಕ್ಕೆ ಅವಕಾಶವಿರುವ `ಪೇಯ್ಡ್ ಸಪೋರ್ಟ್ ಸಿಸ್ಟಂ’ ಅನ್ನು ನಾವು ಬೆಳೆಸಬೇಕು. ಮಹಿಳಾ ಕೋಟಾ ಈಗ ಗತಕಾಲದ ಸಂಗತಿಯಷ್ಟೆ.
-ವಿನೀತಾ ಸಿಂಗ್, ಸಿಕೋಯಿಯಾ ಕ್ಯಾಪಿಟಲ್

*
ಉದ್ಯಮಶೀಲ ಮಹಿಳೆಗೆ ತಾಯ್ತನದ ಸಂದರ್ಭದಲ್ಲಿ ತುಂಬಾ ಕಷ್ಟವಾಗುತ್ತದೆ. ಆಗ ಸಹೋದ್ಯೋಗಿಗಳು ನನ್ನ ನೆರವಿಗೆ ಬಂದರು. ಇದರಿಂದಾಗಿ ಕೆಲವೇ ತಿಂಗಳಲ್ಲಿ ನಾನು ಮತ್ತೆ ಕಂಪನಿಗೆ ಬಂದೆ.
-ಸಾಕ್ಷಿ ಚೋಪ್ರಾ, ಶುಗರ್ ಕಾಸ್ಮೆಟಿಕ್ಸ್

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT