ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಒಳನೋಟ: ಕೋಮುಕಿಡಿಗಾಗಿ ಬೊಮ್ಮಾಯಿಗೆ ಯೋಗಿ ಮಾದರಿಯ ಹಂಗೇಕೆ?

Last Updated 30 ಅಕ್ಟೋಬರ್ 2021, 21:42 IST
ಅಕ್ಷರ ಗಾತ್ರ

ಬಿಜೆಪಿಯ ಹಲವು ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಶಿಕ್ಷಣದ ಕೊರತೆ ಇದೆ ಮಾತ್ರವಲ್ಲ, ಅವರು ಬಾಯಿ ತೆರೆದಾಗಲೆಲ್ಲ ಅದರ ನಿರ್ಲಜ್ಜ ಪ್ರದರ್ಶನವನ್ನೂ ಮಾಡುತ್ತಾರೆ. ಅವರಿಗೆಲ್ಲ ಹೋಲಿಸಿದರೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬಹುದೊಡ್ಡ ಚಿಂತಕ ಎಂದೇ ಪರಿಗಣಿಸಬೇಕಾಗುತ್ತದೆ.

ತಂದೆ ಎಸ್‌.ಆರ್‌. ಬೊಮ್ಮಾಯಿ, ರಾಮಕೃಷ್ಣ ಹೆಗಡೆ, ಜೆ.ಎಚ್‌.ಪಟೇಲ್‌ ಮತ್ತು ಜನತಾ ಪರಿವಾರದ ಇತರರ ಗರಡಿಯಲ್ಲಿ ಪಳಗಿದವರು ಬಸವರಾಜ ಬೊಮ್ಮಾಯಿ. ಸಾಮಾಜಿಕ ವಿದ್ಯಮಾನವನ್ನು ‘ಮಾನವೀಯ’ ಮತ್ತು ‘ಪ್ರಗತಿಪರ’ವಾಗಿ ವಿಶ್ಲೇಷಿಸಿ ಅದಕ್ಕೆ ತಾರ್ಕಿಕ ವಿವರಣೆ ಕೊಡುವುದುಎಂಜಿನಿಯರಿಂಗ್‌ ವಿದ್ಯಾಭ್ಯಾಸವೂ ಇರುವಬೊಮ್ಮಾಯಿ ಅವರಿಗೆ ಸಾಧ್ಯವಾಗಬೇಕು. ಆದರೆ, ರಾಜಕೀಯ ಉದ್ದೇಶಕ್ಕಾಗಿ ಧರ್ಮವನ್ನು ವಿಷವಾಗಿ ಬಳಸಿಕೊಳ್ಳುವ ಅತಾರ್ಕಿಕತೆಯನ್ನು ಅವರು ಒಪ್ಪುವುದು ಹೇಗೆ ಸಾಧ್ಯವಾಯಿತು ಎಂಬುದೇ ಬಿಡಿಸಲಾಗದ ಒಗಟು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಮತೀಯ ಗೂಂಡಾಗಿರಿಯನ್ನು ಸಮರ್ಥನೆ ಮಾಡಿಕೊಳ್ಳಲು ಬೊಮ್ಮಾಯಿ ಅವರು ನೀಡಿರುವ ಹೇಳಿಕೆ ವಿಚಿತ್ರವಾಗಿದೆ– ‘ಸಮಾಜದಲ್ಲಿ ನೈತಿಕ ಮೌಲ್ಯದ ಕುಸಿತ’ ಆದಾಗ ಮತೀಯ ಗೂಂಡಾಗಿರಿ ನಡೆಯತ್ತದೆ ಎಂದಿದ್ದಾರೆ. ಅವರ ಪ್ರಕಾರ, ಸ್ಥಳೀಯ ಯುವಜನರನ್ನು ಬೆದರಿಸುವವರು ಮತ್ತು ಥಳಿಸುವವರು ನೈತಿಕತೆಯ ಸಂರಕ್ಷಕರು. ಹೀಗೆ ಥಳಿತಕ್ಕೆ ಒಳಗಾಗುವವರಲ್ಲಿ ನೈತಿಕತೆಯ ಕೊರತೆ ಇದೆ, ಅವರು ಬೆದರಿಕೆಗೆ, ಥಳಿತಕ್ಕೆ ಒಳಗಾಗಲು ಅರ್ಹರೇ ಆಗಿದ್ಧಾರೆ. ಇದು ಅತ್ಯಂತ ಚಿಂತಾಜನಕವಾದ ಮನಸ್ಥಿತಿಯಾಗಿದೆ.

ವಿವಿಧ ಧರ್ಮಗಳ ಯುವಜನರು ಒಟ್ಟಾಗಿ ಪ್ರಯಾಣಿಸುತ್ತಿದ್ದಾಗ ಅಥವಾ ಜತೆಗಿದ್ದಾಗ ಅವರ ಮೇಲೆ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಹಲ್ಲೆ ನಡೆಸಿದ್ದು ದಕ್ಷಿಣ ಕನ್ನಡಲ್ಲಿ ಇತ್ತೀಚೆಗೆಹಲವು ಬಾರಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಬೊಮ್ಮಾಯಿಅವರ ಹೇಳಿಕೆಯನ್ನು ಗಮನಿಸಬೇಕು. ಇಂಥ ಘಟನೆಗಳನ್ನು‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ’ ಆಗಿ ನೋಡಬೇಕು ಎಂದುಬೊಮ್ಮಾಯಿ ಹೇಳಿದ್ದಾರೆ.

ವಿವಿಧ ಧರ್ಮಗಳ ಯುವ ಜನರು ಜತೆಗೂಡುವುದನ್ನು ಇಲ್ಲಿ ‘ಕ್ರಿಯೆ’ ಎಂದು ಪರಿಗಣಿಸಲಾಗಿದೆ. ಇದು ಯಾವುದೇ ಕಾನೂನಿನ ದೃಷ್ಟಿಯಲ್ಲಿ ಅಪರಾಧ ಅಲ್ಲ. ‘ಪ್ರತಿಕ್ರಿಯೆ’ ಎಂಬುದು ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ನಡೆಸುವ ಹಲ್ಲೆ. ಇದು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 319, 324, 504, 506 ಮತ್ತು 509ರ ಅಡಿಯಲ್ಲಿ ಅಪರಾಧ. ಆದರೆ, ಈ ಅಪರಾಧ ಎಸಗುವವರನ್ನು ‘ಧರ್ಮರಕ್ಷಕರು’ ಎಂದು ಮುಖ್ಯಮಂತ್ರಿ ಬಣ್ಣಿಸಿದ್ದಾರೆ.

ಮೊದಲನೆಯದಾಗಿ, ಸರ್ಕಾರ ಅಥವಾ ರಾಜಕೀಯ ಪಕ್ಷ ಅಥವಾ ಗೂಂಡಾಗಳು ನಮ್ಮ ನೈತಿಕತೆಯ ಸಂರಕ್ಷಕರಾದದ್ದು ಯಾವಾಗಿನಿಂದ? ನಾವು ಒಂದು ಪಕ್ಷವನ್ನು ಅಧಿಕಾರಕ್ಕೆ ತರುವಾಗ, ನಮ್ಮ ಹೆಣ್ಣು ಮಕ್ಕಳನ್ನು ಯಾರು ಮದುವೆ ಆಗಬೇಕು ಅಥವಾ ನಮ್ಮ ಮಕ್ಕಳು ಯಾರ ಜತೆ ಸೇರಬಹುದು ಎಂಬುದನ್ನು ನಿರ್ಧರಿಸುವ ಶಾಸನ ರಚನೆಯ ಅಧಿಕಾರವನ್ನು ನೀಡುವುದಿಲ್ಲ. ನಮ್ಮ ಖಾಸಗಿ ಅಥವಾ ಸಾಮಾಜಿಕ ಬದುಕಿನ ಮೇಲಿನ ಈ ಉಲ್ಲಂಘನೆಯನ್ನು ನಿರಂಕುಶಾಧಿಪತ್ಯ ಎಂದೇ ಹೇಳಬೇಕಾಗುತ್ತದೆ. ಆದರೆ, ನಮ್ಮದು ನಿರಂಕುಶಾಧಿಪತ್ಯ ಅಲ್ಲ.

ಎರಡನೆಯದಾಗಿ, ನಮ್ಮ ನೈತಿಕ ಮೌಲ್ಯಗಳು ಕುಸಿದಿವೆ ಎಂದು ಸರ್ಕಾರ ನಿರ್ಧರಿಸುವುದು ಹೇಗೆ? ಕುಸಿದಿದೆ ಎನ್ನಲು ಮಾನದಂಡ ಏನು ಮತ್ತು ಅದನ್ನು ನಿರ್ಧರಿಸುವವರು ಯಾರು? ಮೂರನೆಯದಾಗಿ, ‘ನೈತಿಕ ಮೌಲ್ಯ’ಗಳನ್ನು ಎತ್ತಿ ಹಿಡಿಯುವ ಹೊಣೆಯನ್ನು ಸರ್ಕಾರವು ಹೊರಗುತ್ತಿಗೆ ನೀಡಿದೆಯೇ?

ಮತಾಂತರದ ವಿರುದ್ಧ ಕಾನೂನು ರಚಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಇತ್ತೀಚಿಗೆ ಹೇಳಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮಾದರಿಯನ್ನು ಬೊಮ್ಮಾಯಿ ಅನುಸರಿಸುತ್ತಿದ್ದಾರೆ ಎಂಬುದು ಸ್ಪಷ್ಟ. ಯೋಗಿ ಮತ್ತು ಅಮಿತ್‌ ಶಾ ಅವರು ಕರ್ನಾಟಕದಲ್ಲಿ ನಡೆಸಿದ ಪ್ರಚಾರವನ್ನು ಇಲ್ಲಿನ ಜನರು ಇಷ್ಟಪಟ್ಟಿಲ್ಲ ಎಂಬುದನ್ನು ಬೊಮ್ಮಾಯಿ ಅವರು ನೆನಪಿನಲ್ಲಿ ಇರಿಸಿಕೊಳ್ಳುವುದು ಒಳ್ಳೆಯದು. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬಾರದಿರಲು ಇದುವೇ ಕಾರಣ.

ಒಡೆಯರ್‌ ಮತ್ತು ಟಿಪ್ಪು ಸುಲ್ತಾನ್‌ ಆಳಿದ ನಾಡು ಇದು; ಬಸವಣ್ಣ ಮತ್ತು ಶಿಶುನಾಳ ಷರೀಫರು ಈ ನಾಡಿನ ಸಿದ್ಧಾಂತವನ್ನು ರೂಪಿಸಿದವರು ಎಂಬುದನ್ನು ಬೊಮ್ಮಾಯಿ ಮರೆಯಬಾರದು.

ನಾಗಪುರವಷ್ಟೇ ಅಲ್ಲ, ಲಖನೌ ಅಥವಾ ಗುಜರಾತ್‌ ಯಾವುದೂ ಕರ್ನಾಟಕದ ಶಾಸನ ರೂಪಿಸುವಿಕೆಗೆ ಮಾದರಿ ಆಗಬಾರದು. ಧಾರ್ಮಿಕ ಧ್ರುವೀಕರಣದ ವಿಷವಲ್ಲದೆ ಬೇರೇನೂ ಈ ಮಾದರಿಗಳಲ್ಲಿ ಇಲ್ಲ. ನಮ್ಮದೇ ಇತಿಹಾಸ, ಸಂಸ್ಕೃತಿ ಮತ್ತು ವಿವೇಕಕ್ಕೆ ಬದ್ಧರಾಗೋಣ. ಸಂವಿಧಾನವೇ ನಮಗೆ ಮಾರ್ಗದರ್ಶಕವಾಗಲಿ.

(ಲೇಖಕ: ಸಚಿವಾಲಯದ ನಿವೃತ್ತ ಅಧಿಕಾರಿ, ಭಾರತ ಸರ್ಕಾರ).

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT