ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವೀಣ್‌ ಹತ್ಯೆ: ತಪ್ಪಿತಸ್ಥರಿಗೆ ಮೊದಲು ಶಿಕ್ಷೆಯಾಗಲಿ: ಡಿ.ಕೆ. ಶಿವಕುಮಾರ್‌

Last Updated 28 ಜುಲೈ 2022, 7:47 IST
ಅಕ್ಷರ ಗಾತ್ರ

ಬೆಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ಕೊಲೆ ಪ್ರಕರಣದ ತನಿಖೆಯನ್ನು ಯಾವುದೇ ರೀತಿಯಲ್ಲಿ ಬೇಕಿದ್ದರೂ ಸರ್ಕಾರ ಮಾಡಲಿ, ಯಾವುದೇ ಸಂಘಟನೆಯನ್ನು ನಿಷೇಧಿಸಲಿ. ಆದರೆ, ಮೊದಲು ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ಇನ್ನು ಮುಂದೆ ಇಂತಹ ಘಟನೆಗಳು ನಡೆಯಬಾರದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಪ್ರವೀಣ್ ಕೊಲೆ ಪ್ರಕರಣ ಬಹಳ ಅನ್ಯಾಯ. ಇಂತಹ ಘಟನೆಗಳು ಹೆಚ್ಚಾಗುತ್ತಿದ್ದು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಯಾರಿಗೂ ರಕ್ಷಣೆ ಇಲ್ಲ. ಸರ್ಕಾರವೇ ನೈತಿಕ ಪೊಲೀಸ್ ಗಿರಿಗೆ ಪ್ರೋತ್ಸಾಹ ನೀಡಿದೆ. ಆ ಮೂಲಕ ಪರಿಸ್ಥಿತಿ ಹದಗೆಡಲು ಕಾರಣವಾಗಿದೆ’ ಎಂದು ದೂರಿದರು.

‘ನಮಗೆ ಇದರಲ್ಲಿ ರಾಜಕಾರಣ ಬೇಕಿಲ್ಲ. ನಾವು ಸರ್ಕಾರದ ಕ್ರಮಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಕಾನೂನು ತನ್ನ ಕೆಲಸ ಮಾಡಲಿ. ಆದರೆ, ಸರ್ಕಾರ ತನ್ನ ತಪ್ಪು ತಿದ್ದಿಕೊಳ್ಳಬೇಕು. ನಾವು ಜನರ ಭಾವನೆಗೆ ಗೌರವ ನೀಡುತ್ತೇವೆ. ಜನರೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ’ ಎಂದರು.

‘ಜನರ ಆಕ್ರೋಶ ಮೊದಲಿನಿಂದಲೇ ಇತ್ತು. ಆದರೆ, ಸರ್ಕಾರ ಆರಂಭದಿಂದಲೇ ಪರಿಸ್ಥಿತಿ ನಿಯಂತ್ರಣ ಮಾಡಿದ್ದರೆ ಈ ದುಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ರಾಜ್ಯದ ಕರಾವಳಿ ಭಾಗದಲ್ಲಿ ಶಾಂತಿ ಸ್ಥಾಪಿಸುವ ಕೆಲಸ ಮಾಡಲಿ. ಎಲ್ಲರೂ ತಮ್ಮ, ತಮ್ಮ ಧರ್ಮ ರಕ್ಷಣೆ ಮಾಡಿಕೊಳ್ಳುತ್ತಾರೆ. ಪೊಲೀಸರು ಸ್ವಾತಂತ್ರ್ಯವಾಗಿ ತನಿಖೆ ಮಾಡಲು ಬಿಡಿ. ಪೊಲೀಸ್ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಪ್ರಕರಣ ದಾರಿ ತಪ್ಪಿಸಬಾರದು’ ಎಂದರು.

ಸರ್ಕಾರ ಜನೋತ್ಸವ ರದ್ದು ಮಾಡಿದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅದು ಜನೋತ್ಸವ ಅಲ್ಲ, ಭ್ರಷ್ಟೋತ್ಸವ. ಸರ್ಕಾರ ಸರಿಯಾಗಿ ಇದ್ದಿದ್ದರೆ ಯಾಕೆ ಹೆದರಬೇಕು? ಕಾರ್ಯಕ್ರಮ ಮಾಡಬೇಕಿತ್ತು. ಅವರು ಸಾಧನೆ ಮಾಡದೇ ಈ ಕಾರ್ಯಕ್ರಮ ಮಾಡಲು ಮುಂದಾಗಿದ್ದೇ ತಪ್ಪು' ಎಂದರು.

‘ಬಿಜೆಪಿ ನಾಯಕರು ಅನಗತ್ಯವಾಗಿ ಕಾಂಗ್ರೆಸ್ ನಾಯಕರನ್ನು ಎಳೆದು ತಂದು ರಾಜಕಾರಣ ಮಾಡಬಾರದು. ಕಾರ್ಯಕರ್ತರು ಯಾವುದೇ ಪಕ್ಷದವರಾದರೂ ಅವರ ಭಾವನೆಗೆ ಗೌರವ ನೀಡಬೇಕು. ಅವರು ಒಂದು ಸಿದ್ಧಾಂತದ ಮೇಲೆ ಕೆಲಸ ಮಾಡುತ್ತಾರೆ. ಅದನ್ನು ತಪ್ಪು ಎಂದು ಹೇಳಲು ಸಾಧ್ಯವೇ? ಅವರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ. ಈ ಸಂದರ್ಭದಲ್ಲಿ ನಾನು ರಾಜಕಾರಣ ಮಾಡಲು ಇಚ್ಛಿಸುವುದಿಲ್ಲ’ ಎಂದೂ ಹೇಳಿದರು

‘ಎಲ್ಲರಿಗೂ ರಕ್ಷಣೆ ಅಸಾಧ್ಯ’ ಎಂಬ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ’ಹಾಗಿದ್ದರೆ ಸರ್ಕಾರ ಏಕೆ ಇರಬೇಕು’ ಎಂದು ಪ್ರಶ್ನಿಸಿದರು.

‘ಮೈಸೂರಿನಲ್ಲಿ ಅತ್ಯಾಚಾರ ಆದಾಗ ಅಷ್ಟು ಹೊತ್ತಲ್ಲಿ ಆಕೆ ಹೊರಗೆ ಯಾಕೆ ಹೋಗಬೇಕಿತ್ತು? ಎಂದು ಗೃಹ ಸಚಿವರೇ ಕೇಳಿದ್ದರು. ನಾಲ್ಕೈದು ದಿನಗಳ ಹಿಂದೆಯೂ ಆ ಭಾಗದಲ್ಲಿ ಕೊಲೆಯಾಗಿದ್ದು, ಇವರು ಯಾವ ಕ್ರಮ ಕೈಗೊಂಡಿದ್ದಾರೆ? ನಾನು ಬುಧವಾರ ರಾತ್ರಿಯೇ ಡಿಐಜಿ ಜತೆ ಮಾತನಾಡಿದ್ದು, ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದರು. ಈ ಪ್ರಕರಣದಲ್ಲಿ ಮುಕ್ತ ತನಿಖೆ ಆಗಬೇಕು. ರಾಜಕಾರಣಿಗಳು ಮಾತು ಕಡಿಮೆ ಮಾಡಬೇಕು. ಪೊಲೀಸರು ಕೆಲಸ ಮಾಡಬೇಕು’ ಎಂದರು.

ಕಾಂಗ್ರೆಸ್ ಕಾಲದಲ್ಲಿ 22 ಕೊಲೆಯಾಗಿತ್ತು ಎಂಬ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, ‘ನಮ್ಮ ಕಾಲದಲ್ಲಿ 25 ಆಗಿತ್ತೋ, ಇವರ ಕಾಲದಲ್ಲಿ 35 ಆಗಿದೆಯೋ, 100 ಆಗಿದೆಯೋ ಎಂಬ ಬಗ್ಗೆ ಮಾಧ್ಯಮಗಳೇ ಪಟ್ಟಿ ಪ್ರಕಟಿಸಿವೆ' ಎಂದರು.

ಕಾಂಗ್ರೆಸ್ ಬೆಂಬಲಿತ ಮತಾಂಧ ಶಕ್ತಿಗಳು ಈ ಕೃತ್ಯದ ಹಿಂದೆ ಇವೆ ಎಂಬ ಬಿಜೆಪಿ ಆರೋಪಕ್ಕೆ, ‘ಅವರು (ಬಿಜೆಪಿಯವರು) ಕೇವಲ ರಾಜಕೀಯ ಆರೋಪ ಮಾಡುತ್ತಾರೆ. ಆ ರೀತಿ ಇದ್ದರೆ ಅದನ್ನು ಸಾಬೀತುಪಡಿಸಿ, ಶಿಕ್ಷೆ ನೀಡಲಿ. ಯಾರು ಬೇಡ ಎಂದವರು? ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ‘' ಎಂದ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT