ಶಿವಮೊಗ್ಗ: ಜಿಲ್ಲೆಯಲ್ಲಿ ಭಾನುವಾರ ಮಳೆ ಪ್ರಮಾಣ ತಗ್ಗಿದ್ದು, ಜಲಾಶಯಗಳ ಒಳಹರಿವು ಕಡಿಮೆಯಾಗಿದೆ. ಶನಿವಾರ40.1 ಸೆಂ.ಮೀ. ಮಳೆ ಸುರಿದು ದಾಖಲೆ ಬರೆದಿದ್ದ ಚಕ್ರ ಜಲಾಶಯ ಪ್ರದೇಶದಲ್ಲಿ ಭಾನುವಾರ 7.20 ಸೆಂ.ಮೀ. ಮಳೆ ದಾಖಲಾಗಿದೆ.
ಶನಿವಾರ ಲಿಂಗನಮಕ್ಕಿ ಜಲಾಶಯಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ಹರಿದುಬಂದಿತ್ತು. ಈಗಾಗಲೇ ಭರ್ತಿಯಾಗಿ ಹರಿಯುತ್ತಿರುವ ತುಂಗಾ ನದಿಗೆ 65 ಸಾವಿರ ಕ್ಯುಸೆಕ್ ನೀರು ಹರಿದುಬರುತ್ತಿದ್ದು, 72 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಹಸುಗಳ ಸಾವು: ಆನಂದಪುರ ಸಮೀಪದ ಬೈರಾಪುರದಲ್ಲಿ ಸುರಿದ ಭಾರಿ ಮಳೆಗೆ ಪ್ರವಾಹ ಉಂಟಾಗಿ ಮೇಯಲು ಹೋದ 13 ಹಸುಗಳು ಸಾವನ್ನಪ್ಪಿವೆ. ಗೌರಿಹಳ್ಳ ತುಂಬಿ ಹರಿದು ಪ್ರವಾಹ ಉಂಟಾದ ಪರಿಣಾಮ 30 ಹಸುಗಳು ಸಿಲುಕಿದ್ದವು.
ದಾವಣಗೆರೆ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, ಮಳೆಯಿಂದಾಗಿ 59 ಮನೆಗಳಿಗೆ ಹಾನಿಯಾಗಿದ್ದು, ₹27.85 ಲಕ್ಷದ ಆಸ್ತಿ ನಷ್ಟವಾಗಿದೆ.