ಬೆಂಗಳೂರು: ‘ಸದೃಢ ಮತ್ತು ಉತ್ತಮ ಭವಿಷ್ಯದ ರಾಜ್ಯ ನಿರ್ಮಾಣಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ‘ಚಲಿಸು ಕರ್ನಾಟಕ’ ಹೆಸರಿನಲ್ಲಿ ಸೈಕಲ್ ಯಾತ್ರೆ ನ.30ರಿಂದ ಡಿ.7ರ ತನಕ ಕಿತ್ತೂರಿನಿಂದ ಬಳ್ಳಾರಿ ತನಕ ಹಮ್ಮಿಕೊಳ್ಳಲಾಗಿದೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಎನ್. ದೀಪಕ್ ತಿಳಿಸಿದರು.
‘ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಚಾಲನೆಗೊಳ್ಳುವ ಸೈಕಲ್ ಯಾತ್ರೆಗೆ ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಚಾಲನೆ ನೀಡುವರು. ಗದಗ, ಧಾರವಾಡ, ಹುಬ್ಬಳ್ಳಿ, ಅಣ್ಣಿಗೇರಿ, ಲಕ್ಕುಂಡಿ, ಕೊಪ್ಪಳ, ಹೊಸಪೇಟೆ ಮೂಲಕ ಡಿ.7ರಂದು ಯಾತ್ರೆ ಬಳ್ಳಾರಿ ತಲುಪಲಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
‘ಸದೃಢ ಕರ್ನಾಟಕ ನಿರ್ಮಾಣಕ್ಕೆ ಸ್ವಚ್ಛ, ಪ್ರಾಮಾಣಿಕ ಮತ್ತು ಜನಪರ ರಾಜಕಾರಣದ ಅವಶ್ಯ ಇದೆ ಎಂಬುದನ್ನು ಜನರಿಗೆ ತಿಳಿಸಲು ಮತ್ತು ಪ್ರಸ್ತುತ ರಾಜ್ಯದ ಪರಿಸ್ಥಿತಿ ಅರಿಯಲು ಈ ಸೈಕಲ್ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು.
ಮೊದಲ ಹಂತದಲ್ಲಿ ಸೆಪ್ಟೆಂಬರ್ 14ರಂದು ಕೋಲಾರದಿಂದ ಚಿತ್ರದುರ್ಗದ ತನಕ ಯಾತ್ರೆ ನಡೆಸಲಾಯಿತು. ಪಕ್ಷದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಅವರಿಗೆ ಅಪಘಾತ ಆಗಿದ್ದರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಅವರ ಆರೋಗ್ಯ ಸುಧಾರಿಸಿದ್ದು, ಎರಡನೇ ಹಂತದ ಯಾತ್ರೆ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಪ್ರಮುಖ ವಿಚಾರಗಳನ್ನು ತೆಗೆದುಕೊಂಡು ಜಾಥಾ ನಡೆಸಲಾಗುವುದು ಎಂದು ಹೇಳಿದರು.
‘ಕೋವಿಡ್ ಕಾರಣದಿಂದ ರಾಜ್ಯದ ಜನ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ನಿರಂತರವಾಗಿ ನೆರೆ ಮತ್ತು ಬರದಂತಹ ತೊಂದರೆಗೆ ಸಿಲುಕಿದ್ದು, ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ. ನಿರುದ್ಯೋಗ, ಅಸಮಾನತೆ, ಭ್ರಷ್ಟಾಚಾರ ದಿನೇ ದಿನೇ ಹೆಚ್ಚುತ್ತಿದ್ದು, ಜನಪರ ಮತ್ತು ಪ್ರಾಮಾಣಿಕ ರಾಜಕಾರಣದಿಂದ ಮಾತ್ರ ಇವುಗಳಿಗೆ ಮುಕ್ತಿ ಸಿಗಲಿದೆ’ ಎಂದು ಪ್ರತಿಪಾದಿಸಿದರು.