ಮೈಸೂರು: ‘ಇಲ್ಲಿಯವರೆಗೂ ನಾನು ಗೋಮಾಂಸ, ಹಂದಿ ಮಾಂಸ ತಿಂದಿಲ್ಲ. ತಿನ್ನಬೇಕು ಅನ್ಸಿದ್ರೆ ತಿಂತೀನಿ. ಆಹಾರ ನನ್ನ ಹಕ್ಕು. ಅದನ್ನ ಕೇಳೋಕೆ ಇವನ್ಯಾರು?’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೀಕೆಗೆ ಏಕ ವಚನದಲ್ಲೇ ತಿರುಗೇಟು ನೀಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಗೋಮಾಂಸ ತಿನ್ನೋದೇ ಸಾಧನೆ ಅಂದಿದ್ದಾನೆ. ಅವನಿಗೆ ನಾನೇನು ಮಾಂಸ ತಿನ್ನು ಅಂತ ಹೇಳಿದ್ದೀನಾ? ಅವನು ಸೊಪ್ಪು ತಿನ್ನಲಿ. ನಾನು ಕುರಿ ಮಾಂಸ ತಿನ್ನುವೆ’ ಎಂದರು.
‘ಜಗತ್ತಿನಲ್ಲಿ ದನ ಹಾಗೂ ಗೋಮಾಂಸ ತಿನ್ನೋರೇ ಹೆಚ್ಚಿದ್ದಾರೆ. ಚೀನಾದಲ್ಲಿ ನಾಲ್ಕು ಕಾಲಿನ ಮಂಚ ಬಿಟ್ಟು ಉಳಿದ ಎಲ್ಲವನ್ನೂ ತಿನ್ತಾರೆ. ಅವರ್ಯಾರೂ ಮನುಷ್ಯರಲ್ವಾ. ಗೋಮಾಂಸ ತಿನ್ನುವ ಬಗ್ಗೆ ಶ್ಲೋಕವೊಂದಿದೆ. ಅದನ್ನು ಸರಿಯಾಗಿ ಹೇಳದಿದ್ದರೆ ನೀವೇ ವಿವಾದ ಮಾಡ್ತೀರಿ. ಶ್ಲೋಕ ಬರೆದಿರೋದು ಯಾರು’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಮತ್ತಷ್ಟು ಭ್ರಷ್ಟಾಚಾರ:ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಹೊಸದಾಗಿ ಏಳು ಸಚಿವರು ಬಂದರೂ ಈ ಸರ್ಕಾರ ಟೇಕ್ ಆಫ್ ಆಗುವುದಿಲ್ಲ. ಈಗಲೇ ಅಧೋಗತಿ ತಲುಪಿದೆ. ವಿಸ್ತರಣೆಯಿಂದ ಮತ್ತಷ್ಟು ಭ್ರಷ್ಟಾಚಾರ ಹೆಚ್ಚಬಹುದಷ್ಟೇ’ ಎಂದರು.
‘ಬಜೆಟ್ ಮಂಡನೆಯಾಗುವವರೆಗೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಬಹುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.