ಚಿಕ್ಕಮಗಳೂರು: ಶೃಂಗೇರಿ ಪಟ್ಟಣದಲ್ಲಿ ಶಂಕರಾಚಾರ್ಯರ ಪ್ರತಿಮೆ ಇರುವ ಮಂಟಪದ ಗೋಪುರದ ಮೇಲೆ ಗುರುವಾರ ಪತ್ತೆಯಾಗಿದ್ದ ಬಟ್ಟೆಯಿಂದ ಸೃಷ್ಟಿಯಾಗಿದ್ದ ಗೊಂದಲ ಬಗೆಹರಿದಿದೆ. ಆ ಬಟ್ಟೆ ಈದ್ ಮಿಲಾದ್ ಬ್ಯಾನರ್ ಆಗಿದ್ದು, ಕೃತ್ಯಕ್ಕೆ ಸಂಬಂಧಿಸಿದಂತೆ ಬೀಲಗದ್ದೆಯ ಮಿಲಿಂದ್ (28) ಎಂಬಾತನನ್ನು ಬಂಧಿಸಲಾಗಿದೆ.
‘ಗೋಪುರದ ಮೇಲಿದ್ದ ಬಟ್ಟೆ ಯಾವುದೇ ಪಕ್ಷ, ಸಂಘಟನೆಯ ಬಾವುಟ ಅಲ್ಲ. ಅದು 2019ರ ಈದ್ ಮಿಲಾದ್ ಬ್ಯಾನರ್. ಅದನ್ನು ಗೋಪುರದ ಮೇಲೆ ಹಾಕಿದ್ದು ಮಿಲಿಂದ್ ಎಂದು ವಿಚಾರಣೆ ವೇಳೆ ಗೊತ್ತಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ತಂಡವು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸುಳಿವು ಆಧರಿಸಿ ಆರೋಪಿಯನ್ನು ಪತ್ತೆ ಮಾಡಿದೆ. ಮಿಲಿಂದ್ ಮದ್ಯವ್ಯಸನಿಯಾಗಿದ್ದು, ಇದೇ 12ರಂದು ರಾತ್ರಿ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ’ ಎಂದು ಮಾಹಿತಿ ನೀಡಿದರು.
‘ಶೃಂಗೇರಿಯ ಜಾಮಿಯಾ ಮಸೀದಿಯಲ್ಲಿದ್ದ ಈದ್ ಮಿಲಾದ್ ಬ್ಯಾನರ್ ಅನ್ನು ಮಳೆಯಿಂದ ಮೈಒದ್ದೆಯಾಗದಂತೆ ಮುಚ್ಚಿಕೊಳ್ಳಲು ರಕ್ಷಣೆಗೆ ಒಯ್ದಿದ್ದೆ. ಬ್ಯಾನರ್ ದೇವರಿಗೆ ಸಂಬಂಧಿಸಿದ್ದು ಎಂದು ಗೊತ್ತಾದ ನಂತರ ಅದನ್ನು ದೇವರಿಗೆ ಕೊಡಲು ಯೋಚಿಸಿ ಶಂಕರಾಚಾರ್ಯ ಪ್ರತಿಮೆ ಇರುವ ಮಂಟಪದ ಗೋಪುರಕ್ಕೆ ಹಾಕಿದೆ ಎಂದು ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ’ ಎಂದು ಹೇಳಿದರು.
‘2012 ಮತ್ತು 2017ರ ಎರಡು ಕಳವು ಪ್ರಕರಣಗಳಲ್ಲಿ ಈತನ ಹೆಸರು ಇದೆ. ಯಾವುದೇ ಪಕ್ಷ ಅಥವಾ ಸಂಘಟನೆಯ ನಂಟು ಈತನಿಗಿಲ್ಲ. ಮದ್ಯದ ಅಮಲಿನಲ್ಲಿ ಕೃತ್ಯ ಎಸಗಿದ್ದಾನೆ. ಉದ್ದೇಶಪೂರ್ವಕವಾಗಿ ಎಸಗಿದಂತೆ ಕಂಡುಬಂದಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.