ಬೆಂಗಳೂರು: ರಾಜ್ಯದ ಎಲ್ಲಾ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಸರ್ವರ್ ಸಮಸ್ಯೆಯಿಂದ ಸ್ಥಗಿತಗೊಂಡಿದ್ದ ಆಸ್ತಿ ನೋಂದಣಿ ಪ್ರಕ್ರಿಯೆ ಬುಧವಾರ ಪುನರ್ ಆರಂಭಗೊಂಡಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ತಾಂತ್ರಿಕ ತಂಡ ಹಗಲು–ರಾತ್ರಿ ನಡೆಸಿ ಸಮಸ್ಯೆ ಸರಿಪಡಿಸಿದೆ. ಬುಧವಾರ ಬೆಳಿಗ್ಗೆ 11.30ರ ಬಳಿಕ ನೋಂದಣಿ ಪ್ರಕ್ರಿಯೆ ಆರಂಭವಾಯಿತು.
ಸೋಮವಾರ ಬೆಳಿಗ್ಗೆಯಿಂದ ಸರ್ವರ್ ಸ್ಥಗಿತಗೊಂಡಿದ್ದರಿಂದ ಕುಟುಂಬ ಸಮೇತ ಆಸ್ತಿ ನೋಂದಣಿಗಾಗಿ ಕಚೇರಿಗೆ ಹೋಗಿದ್ದವರು ಪರದಾಡಿದ್ದರು. ಸೋಮವಾರ ಮತ್ತು ಮಂಗಳವಾರ ಎರಡೂ ದಿನ ಕಚೇರಿ ಎದುರೇ ಕಾದು ಕುಳಿತು ಅಧಿಕಾರಿಗಳ ಧೋರಣೆಗೆ ಗೊಣಗಾಡಿದ್ದರು.
ಬುಧವಾರ ಬೆಳಿಗ್ಗೆ ವೇಳೆಗೆ ಸರ್ವರ್ ಸರಿಯಾದರೂ ಇ.ಸಿ ಪಡೆಯಲು ಸಾಧ್ಯವಾಗಲಿಲ್ಲ. ಕಾವೇರಿ ಪೋರ್ಟಲ್ನಲ್ಲಿ ಇರುವ ತಾಂತ್ರಿಕ ತೊಂದರೆ ಇನ್ನೂ ನಿವಾರಣೆ ಆಗದ ಕಾರಣ ಇ.ಸಿ ವಿತರಣೆ ಸಾಧ್ಯವಾಗಲಿಲ್ಲ. ಗುರುವಾರ ಬೆಳಿಗ್ಗೆ ವೇಳೆಗೆ ಆ ಸಮಸ್ಯೆಯೂ ಪರಿಹಾರವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಆಸ್ತಿ ನೋಂದಣಿ ಪ್ರಕ್ರಿಯೆಗೆ ಸರ್ವರ್ ಸಮಸ್ಯೆ ಪದೇ ಪದೇ ಕಾಡುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.