ಬೆಂಗಳೂರು: ‘ಬೆಂಗಳೂರು ಮತ್ತು ಹುಬ್ಬಳ್ಳಿ–ಧಾರವಾಡಕ್ಕೆ 350 ಎಲೆಕ್ಟ್ರಿಕಲ್ ಬಸ್ ಖರೀದಿಗೆ ಟೆಂಡರ್ ಪ್ರಕ್ರಿಯೆಯನ್ನು ಸರ್ಕಾರ ಶೀಘ್ರದಲ್ಲೇ ಅಂತಿಮಗೊಳಿಸಲಿದೆ’ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಸವದಿ, ‘ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಾಯಧನ ನೀಡಲಿದೆ’ ಎಂದರು.
‘ಕೆಲವು ವರ್ಷಗಳಿಂದೀಚೆಗೆ ಸುಮಾರು ಬಸ್ಸುಗಳು 10 ಲಕ್ಷದಿಂದ 12 ಲಕ್ಷದಷ್ಟು ಕಿ.ಮೀ ಸಂಚರಿಸಿದ್ದು, ಅವುಗಳನ್ನು ಗುಜರಿಗೆ ಹಾಕಬೇಕಾಗಿದೆ. ಆ ಬಸ್ಗಳ ಬದಲು ಈ ಎಲೆಕ್ಟ್ರಿಕಲ್ ಬಸ್ಗಳನ್ನು ಬಳಸಲಾಗುವುದು’ ಎಂದೂ ಅವರು ವಿವರಿಸಿದರು.
ಬಸ್ ಖರೀದಿಗೆ ಅನುದಾನ ಲಭ್ಯತೆಯ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಿಗಮಗಳ ಸುಗಮ ಕಾರ್ಯಾಚರಣೆಗೆ ಈಗಾಗಲೇ ಬ್ಯಾಂಕಿನಿಂದ ಸಾಲ ಪಡೆಯಲಾಗಿದೆ. ಈಗಾಗಲೇ ಸಾಲದ ಅರ್ಧದಷ್ಟು ಹಣ ಲಭ್ಯವಿದೆ’ ಎಂದರು.
ವಿವಿಧ ನಿಗಮಗಳಲ್ಲಿ ನೌಕರರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಲು ರಚಿಸಿದ ಸಮಿತಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಸಮಿತಿ ಈಗಾಗಲೇ ನೌಕರರ ಜೊತೆ ಸಮಲೋಚನೆಗಳನ್ನು ನಡೆಸುತ್ತಿದೆ. ನೌಕರರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ’ ಎಂದೂ ಹೇಳಿದರು.