ಬೆಂಗಳೂರು: ‘ವೀರಶೈವ ಜಂಗಮ ಸಮುದಾಯದವರು ಬೇಡ ಜಂಗಮರೆಂದು ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವ ಸಲುವಾಗಿ ಬೇಡ ಜಂಗಮರ ಸಂವಿಧಾನಬದ್ಧ ಹಕ್ಕುಗಳನ್ನು ಕಸಿಯುವ ಹುನ್ನಾರ ನಡೆಸುತ್ತಿದ್ದಾರೆ’ ಎಂದು ನಕಲಿ ಬೇಡ ಜಂಗಮರ ವಿರೋಧಿ ವೇದಿಕೆಯ ಸಂಚಾಲಕ ಅರ್ಜುನ ಭದ್ರೆ ಆರೋಪಿಸಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ಕುರಿತು ನಿಡುಮಾಮಿಡಿ ಮಠದ ಚನ್ನಮಲ್ಲ ಸ್ವಾಮೀಜಿ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ. ಇದು ಖಂಡನೀಯ’ ಎಂದರು.
‘ಬಸವಣ್ಣನವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿರುವ ನಿಡುಮಾಮಿಡಿ ಸ್ವಾಮೀಜಿ ಅವರ ಈ ನಡೆ ಆಘಾತಕಾರಿ. ಅಂತರಾಳದಲ್ಲಿ ಮೋಹನ ಭಾಗವತರ ವಿಚಾರಗಳನ್ನು ಹೊಂದಿರುವ ಇವರನ್ನು ಅರ್ಥಮಾಡಿಕೊಳ್ಳಲು ದಲಿತ ಸಮುದಾಯಕ್ಕೆ ವಿಳಂಬವಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.