ಸಿ.ಡಿ ಪ್ರಕರಣ ಸಿಬಿಐಗೆ ಒಪ್ಪಿಸಿ, ಡಿಕೆಶಿ ಬಂಧಿಸಿ: ಶಾಸಕ ರಮೇಶ ಜಾರಕಿಹೊಳಿ

ಬೆಳಗಾವಿ: ‘ರಾಜ್ಯದ ಹಲವು ರಾಜಕಾರಣಿಗಳು, ಅಧಿಕಾರಿಗಳ ಬದುಕು ಹಾಳು ಮಾಡಲು ಡಿ.ಕೆ.ಶಿವಕುಮಾರ 110 ಸಿ.ಡಿ.ಗಳನ್ನು ಮಾಡಿಸಿದ್ದಾನೆ. ಇದರ ಬಗ್ಗೆ ಸ್ಪಷ್ಟ ದಾಖಲೆಗಳು ನನ್ನ ಬಳಿ ಇವೆ. ಎಲ್ಲವನ್ನೂ ಸಿಬಿಐ ಅಧಿಕಾರಿಗಳಿಗೆ ನೀಡುತ್ತೇನೆ. ತಕ್ಷಣವೇ ಡಿಕೆಶಿ ಮತ್ತು ಅವನ ಗ್ಯಾಂಗ್ ಬಂಧನವಾಗಬೇಕು’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
‘ನನ್ನ ಹಾಗೂ ಯುವತಿಗೆ ಸಂಬಂಧಿಸಿದ ಸಿ.ಡಿ ಮಾಡಿಸಿದ್ದು ಇದೇ ಮಹಾನಾಯಕ. ರಮೇಶ ಜಾರಕಿಹೊಳಿಯನ್ನು ಜೈಲಿಗೆ ಕಳಿಸಲು ₹40 ಕೋಟಿ ಖರ್ಚು ಮಾಡುತ್ತೇನೆ ಎಂದು ಮಹಾನಾಯಕ ಹೇಳಿದ ಆಡಿಯೊ ನನ್ನ ಬಳಿ ಇದೆ. ಯಾರ್ಯಾರ ಜೀವನ ಹಾಳು ಮಾಡಲು ಏನೇನು ಮಾಡಿದ್ದಾನೆ ಎಂಬ ದಾಖಲೆಗಳೂ ಇವೆ’ ಎಂದು ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ನನ್ನ ಸಿ.ಡಿ ಪ್ರಕರಣದಲ್ಲಿರುವ ಆ ಹುಡುಗಿ, ಶ್ರವಣ್ ಮತ್ತು ನರೇಶ್, ಕನಕಪುರದ ಗ್ರಾನೈಟ್ ಉದ್ಯಮಿ, ಅವನ ಕಾರ್ ಚಾಲಕ ಪರಶಿವಮೂರ್ತಿ, ಮಂಡ್ಯದ ಇಬ್ಬರು ನಾಯಕರು ಆರೋಪಿಗಳು. ಹಾಗಾಗಿ, ಈ ಪ್ರಕರಣ ಸಿಬಿಐಗೆ ಒಪ್ಪಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ’ ಎಂದೂ ಹೇಳಿದರು.
‘ಡಿಕೆಶಿ ಮತ್ತು ನಾನು 1987ರಿಂದ ರಾಜಕೀಯ ಆರಂಭಿಸಿದ್ದೇವು. ಹರಕು ಚಪ್ಪಲಿ ಹಾಕಿಕೊಂಡು ಬಂದವನು ಭ್ರಷ್ಟಾಚಾರದ ಮೂಲಕ ಸಾವಿರಾರು ಕೋಟಿ ಹಣ ಮಾಡಿಕೊಂಡಿದ್ದಾನೆ. ದುಬೈನಲ್ಲಿ, ಲಂಡನ್ನಲ್ಲಿ ಮನೆ ಇದೆ, ಸಾವಿರಾರು ಕೋಟಿ ಹಣ ಇದೆ ಎಂದು ಅವನೇ ಹೇಳಿದ ಧ್ವನಿಮುದ್ರಣ ಕೂಡ ನನ್ನ ಬಳಿ ಇದೆ. ಅದನ್ನೂ ತನಿಖೆಗೆ ನೀಡುತ್ತೇನೆ’ ಎಂದರು.
‘ನನ್ನ ಸಿ.ಡಿ ಬರುವುದು ನನಗೆ ಮೂರು ತಿಂಗಳ ಮುಂಚೆಯೇ ಗೊತ್ತಿತ್ತು. ಅದನ್ನು ಇಟ್ಟುಕೊಂಡು ನನ್ನನ್ನು ‘ಬ್ಲ್ಯಾಕ್ಮೇಲ್’ ಮಾಡಿದರು. ದೊಡ್ಡ ಪ್ರಮಾಣದ ಆರ್ಥಿಕ ಅವ್ಯವಹಾರ ಮಾಡಲು ಯತ್ನಿಸಿದರು. ಆದರೆ, ನಾನು ಸರ್ಕಾರಕ್ಕೆ ಹಾನಿ ಮಾಡಲಿಲ್ಲ. ನನ್ನ ರಾಜಕೀಯ ಜೀವನಕ್ಕೆ ಹಾನಿ ಮಾಡಿಕೊಂಡೆ’ ಎಂದರು.
‘ನಾನು– ಡಿಕೆಶಿ ಒಳ್ಳೆಯ ಸ್ನೇಹಿತರಾಗಿದ್ದೇವು. ಬೆಂಗಳೂರಿನ ಶಾಂತಿನಗರ ಕೋ ಆಪ್ ಸೊಸೈಟಿ ವ್ಯವಹಾರಕ್ಕೆ ಸಂಬಂಧಿಸಿದಂತೆ ನಮ್ಮ ಮಧ್ಯೆ ಬಿರುಕು ಮೂಡಿತು. ಬೆಂಗಳೂರಿನಲ್ಲಿ 66 ಎಕರೆ ಜಾಗಕ್ಕೆ ಸಂಬಂಧಿಸಿದ ₹ 10 ಸಾವಿರ ಕೋಟಿಯ ವ್ಯವಹಾರ ಅದು. ನಾನು ಸಹಕಾರ ಸಚಿವ ಇದ್ದಾಗ ಆ ’ಫೈಲ್ ಕ್ಲಿಯರ್’ ಮಾಡಿಕೊಡು ಎಂದು ಡಿಕೆಶಿ ಗಂಟುಬಿದ್ದ. ನಾನು ‘ಓಕೆ’ ಮಾಡಲಿಲ್ಲ. ಅಂದಿನಿಂದ ಶುರುವಾದ ಜಗಳ ಇಲ್ಲಿಗೆ ಬಂದು ನಿಂತಿದೆ’ ಎಂದೂ ಹೇಳಿದರು.
ಡಿ.ಕೆ.ಶಿವಕುಮಾರ ಅವ್ಯವಹಾರದ ಆಡಿಯೊ ತಮ್ಮ ಬಳಿ ಇದೆ ಎಂದು ಹೇಳಿದ ರಮೇಶ ಜಾರಕಿಹೊಳಿ ಅದನ್ನು ಕೇಳಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.
****
‘ಜಾತಿ ಸಂಘರ್ಷಕ್ಕೆ ಹುನ್ನಾರ’
‘ಬೆಳಗಾವಿ ಗ್ರಾಮೀಣ ಶಾಸಕಿ ವಿಧಾನಸೌಧದಲ್ಲಿ ಮಾತನಾಡುವಾಗಿ ತನ್ನನ್ನು ತಾನು ‘ರಾಣಿ ಚನ್ನಮ್ಮನ ಅಂಶ’ ಎಂದು ಹೇಳಿಕೊಂಡಳು. ಆಗ ನಾನು ಲಿಂಗಾಯತ ಸಮಾಜದ ಮುಖಂಡರೊಬ್ಬರಿಗೆ ಫೋನ್ ಮಾಡಿ ‘ಈ ರೀತಿ ಹೋಲಿಕೆ ಮಾಡಿಕೊಳ್ಳುವುದು ಸರಿಯಲ್ಲ. ಸಮಾಜದವರು ಇದನ್ನು ಖಂಡಿಸಿ’ ಎಂದು ಹೇಳಿದ್ದೆ. ಮಾತನಾಡುವಾಗಿ ಗ್ರಾಮೀಣ ಶಾಸಕಿಗೆ ‘ಕೆಟ್ಟ’ ಪದ ಬಳಸಿದ್ದು ನಿಜ. ಆದರೆ, ಅದನ್ನು ಎಡಿಟ್ ಮಾಡಿ ರಾಣಿ ಚನ್ನಮ್ಮನ ಹೆಸರಿಗೆ ಜೋಡಿಸಿದ್ದಾರೆ. ನಾನು ಚನ್ನಮ್ಮನ ಬಗ್ಗೆಯೇ ಕೆಟ್ಟ ಪದ ಬಳಸಿದ್ದೇನೆ ಎಂಬ ಅರ್ಥದಲ್ಲಿ ಆಡಿಯೊ ಸಿದ್ಧ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅದನ್ನು ಹೊರಗೆ ತರುವುದು ಇವರ ಉದ್ದೇಶ. ಜಾತಿ– ಜಾತಿಗಳ ಮಧ್ಯೆ ಸಂಘರ್ಷ ಮೂಡಿಸುವುದು ಇವರ ಗುರಿ. ನಾನು ಎಲ್ಲ ಸಮಾಜದವರಿಗೂ ಹೇಳುತ್ತೇನೆ; ಇಂಥ ಘಟನೆ ನಡೆದರೆ ಅದಕ್ಕೆ ಡಿಕೆಶಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಕಾರಣ’ ಎಂದು ದೂರಿದರು.
‘ಕಾಂಗ್ರೆಸ್ ಪಕ್ಷ ಹಾಳಾಗಲು ಡಿ.ಕೆ.ಶಿವಕುಮಾರ ಹಾಗೂ ಗ್ರಾಮೀಣ ಶಾಸಕಿ ಕಾರಣ. ಕಳೆದ ಬಾರಿಯ ಚುನಾವಣೆಯಲ್ಲಿ ಈಕೆಗೆ ಟಿಕೆಟ್ ಕೊಡುವುದು ಬೇಡ ಎಂದು ಸ್ವತಃ ಡಿ.ಕೆ.ಶಿವಕುಮಾರ ಹೇಳಿದ್ದ. ಆದರೆ, ನಾನೇ ದುಂಬಾಲು ಬಿದ್ದು ಟಿಕೆಟ್ ಕೊಡಿಸಿದ್ದೆ. ಅದರ ಪರಿಣಾಮವನ್ನು ನಾವು ಇಬ್ಬರೂ ಈಗ ನೋಡುತ್ತಿದ್ದೇವೆ’ ಎಂದರು.
ಕುಂಬಳಕಾಯಿ ಕಳ್ಳನಂತೆ...
‘ರಾಣಿ ಚನ್ನಮ್ಮನ ಬಗ್ಗೆ ರಮೇಶ ಜಾರಕಿಹೊಳಿ ಏನು ಮಾತಾಡಿದ್ದಾರೆ ನನಗೆ ಗೊತ್ತಿಲ್ಲ. ಯಾವುದೂ ಆಡಿಯೊ ನಮ್ಮ ಬಳಿ ಇಲ್ಲ. ಕುಂಬಳಕಾಯಿ ಕಳ್ಳನಂತೆ ತಾವೇ ಸಿಕ್ಕಿಬಿದ್ದಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಪ್ರತಿಕ್ರಿಯಿಸಿದರು.
‘ರಮೇಶ ಜಾರಕಿಹೊಳಿ ಕಾಂಗ್ರೆಸ್ ಬಿಡುವಾಗ ನಮ್ಮನ್ನೂ ಕರೆದರು. ಆದರೆ, ನಾವು ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದೆವು. ‘ಬಿಜೆಪಿ ಸೇರಬೇಡಿ’ ಎಂದು ಅವರಿಗೂ ಕೇಳಿಕೊಂಡೆವು. ಆಗ ಅವರ ಮಾತಿಗೆ ಬೆಲೆ ಕೊಡಲಿಲ್ಲ ಎಂಬ ಕಾರಣಕ್ಕೆ ನಮ್ಮ ಮೇಲೆ ಇಷ್ಟು ದ್ವೇಷ ಸಾಧಿಸುತ್ತಿದ್ದಾರೆ’ ಎಂದು ದೂರಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.