ರಾಮನಗರ: ಪೂರ್ವ ನಿಗದಿಯಂತೆ ಬೆಂಗಳೂರು–ಮೈಸೂರು ದಶಪಥದಲ್ಲಿ ಮಂಗಳವಾರದಿಂದ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಜ್ಜಾಗಿದೆ.
ಟೋಲ್ ಪ್ಲಾಜಾ ಬಳಿ ಅಗತ್ಯ ಸಿಬ್ಬಂದಿಯನ್ನು ಈಗಾಗಲೇ ನಿಯೋಜಿಸಿದೆ. ಪೊಲೀಸ್ ಭದ್ರತೆ ಮತ್ತು ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಮನವಿಯನ್ನೂ ಸಲ್ಲಿಸಿದೆ.
ಮಂಗಳವಾರ ಬೆಳಿಗ್ಗೆ 8 ರಿಂದ ಹೆದ್ದಾರಿ ಟೋಲ್ ಸಂಗ್ರಹ ಶುರುವಾಗಲಿದೆ. ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೆಯೇ ಟೋಲ್ ಸಂಗ್ರಹ ವಿರೋಧಿಸಿ ವಿವಿಧ ಸಂಘಟನೆಗಳು ಟೋಲ್ ಪ್ಲಾಜಾಗೆ ಮುತ್ತಿಗೆ ಹಾಗೂ ಪ್ರತಿಭಟನೆಗೆ ಮುಂದಾಗಿವೆ.
ಬೆಂಗಳೂರು ನಗರ ಜಿಲ್ಲೆಯ ಕಣಮಿಣಕಿ ಹಾಗೂ ರಾಮನಗರ ಜಿಲ್ಲೆಯ ಶೇಷಗಿರಿಹಳ್ಳಿ ಬಳಿ ಹೆದ್ದಾರಿ ಪ್ರಾಧಿಕಾರ ಎರಡು ಟೋಲ್ ಪ್ಲಾಜಾ ನಿರ್ಮಿಸಿದೆ. ಬೆಂಗಳೂರಿನಿಂದ ಮೈಸೂರಿಗೆ ಹೋಗುವವರು ಕಣಮಿಣಕಿ ಬಳಿಹಾಗೂ ಮೈಸೂರು–ರಾಮನಗರ ಕಡೆಯಿಂದ ಬೆಂಗಳೂರು ಪ್ರವೇಶಿಸುವವರು ಶೇಷಗಿರಿಹಳ್ಳಿ ಬಳಿ ಟೋಲ್ ಕಟ್ಟಬೇಕಿದೆ.
ಟೋಲ್ ಆರಂಭಿಸಲು ಮುಂದಾಗಿದ್ದೇ ಆದಲ್ಲಿ ಟೋಲ್ ಪ್ಲಾಜಾಗಳನ್ನು ಕೆಡುವುದಾಗಿ ಎಚ್ಚರಿಕೆಯನ್ನೂ ನೀಡಿವೆ. ಮತ್ತೊಂದೆಡೆ, ಕಾಂಗ್ರೆಸ್ ಕಾರ್ಯಕರ್ತರು ಸಹ ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ಪೊಲೀಸರು ಟೋಲ್ ಪ್ಲಾಜಾಗಳಿಗೆ ಭದ್ರತೆ ಒದಗಿಸಿದ್ದಾರೆ.
ಪರಿಷ್ಕರಣೆ ಆಗದ ದರ ಸದ್ಯ ಬೆಂಗಳೂರು–ನಿಡಘಟ್ಟ ನಡುವಿನ ಮೊದಲ ಹಂತದ ಹೆದ್ದಾರಿಗೆ ಮಾತ್ರ ಟೋಲ್ ಹಾಕಲಾಗಿದೆ. ಸ್ಥಳೀಯ ವಾಹನಗಳಿಗೆ ಕನಿಷ್ಠ ₹70 ಹಾಗೂ ಹೊರ ಜಿಲ್ಲೆ, ರಾಜ್ಯಗಳಿಗೆ ₹135 ದರ ವಿಧಿಸಲಾಗಿದ್ದು, ವಾಹನಗಳ ಸಾಮರ್ಥ್ಯ ಹೆಚ್ಚಿದಂತೆಲ್ಲ ದರವೂ ಹೆಚ್ಚಲಿದೆ. ತಿಂಗಳ ಪಾಸ್ ಸೌಲಭ್ಯವೂ ಇದೆ.
ಸದ್ಯ ವಿಧಿಸಲಾಗಿರುವ ದರ ದುಬಾರಿ ಆಗಿದ್ದು, ಪರಿಷ್ಕರಿಸಬೇಕು ಎಂದು ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿತ್ತು. ಆದರೆ, ದರ ಪರಿಷ್ಕರಣೆ ಆಗಿಲ್ಲ.