ಮೈಸೂರು: ಕಬಿನಿ ಜಲಾಶಯದಿಂದ ಯಾವುದೇ ಮಾಹಿತಿ ನೀಡದೇ ಹಾಗೂ ಸೈರನ್ ಮೊಳಗಿಸದೇ ಏಕಾಏಕಿ ಕಪಿಲಾ ನದಿಗೆ ಹೆಚ್ಚು ನೀರು ಬಿಟ್ಟಿದ್ದರಿಂದ ಶನಿವಾರ ರಾತ್ರಿ ಸಮೀಪದ ಬಿದರಹಳ್ಳಿ ಸೇತುವೆಯ ಮೇಲೆ ನೀರು ಹರಿಯಿತು. ಇದರಿಂದ ಸೇತುವೆ ಮೇಲೆ ಸಂಚರಿಸುತ್ತಿದ್ದವರು ಆತಂಕಗೊಂಡು ಜೀವಭಯದಿಂದ ಸಂಚರಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸ್ಥಳೀಯರು ನೀರು ಬಿಡುವ ಸ್ವಲ್ಪ ಹೊತ್ತಿನ ಮೊದಲೇ ಸೈರನ್ ಮೊಳಗಿಸಬೇಕಿತ್ತು. ಸಾಮಾನ್ಯವಾಗಿ ಈ ಅವಧಿಯಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿರಲಿಲ್ಲ. ಒಂದು ವೇಳೆ ಇನ್ನಷ್ಟು ನೀರು ಹರಿದಿದ್ದರೆ ಕೊಚ್ಚಿಕೊಂಡು ಹೋಗುವ ಸಂಭವ ಇತ್ತು. ಜೀವಭಯದಲ್ಲಿ ಒಂದು ಬದಿಯಿಂದ ಮತ್ತೊಂದು ಬದಿಗೆ ಸಂಚರಿಸಬೇಕಾಯಿತು ಎಂದು ಹೇಳಿದ್ದಾರೆ.
ಜಲಾಶಯದ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ನೀರಿನ ಪ್ರಮಾಣ ಕಡಿಮೆ ಮಾಡಿ ಸೇತುವೆಯ ಎರಡೂ ಬದಿಯಲ್ಲಿದ್ದ ವಾಹನಗಳು ಸಂಚರಿಸಲು ಅನುವು ಮಾಡಿಕೊಟ್ಟರು ಎಂದು ಹೆಸರು ಬಹಿರಂಗಪಡಿಸಲು ಬಯಸದ ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.
ಆರೋಪ ಕುರಿತು 'ಪ್ರಜಾವಾಣಿ' ಕಬಿನಿ ಜಲಾಶಯದ ಕಾರ್ಯಪಾಲಕ ಎಂಜಿನಿಯರ್ ಸುರೇಶಬಾಬು ಅವರನ್ನು ಸಂಪರ್ಕಿಸಿದಾಗ ಅವರು ಆರೋಪ ಸತ್ಯಕ್ಕೆ ದೂರ ಎಂದರು. ನೀರು ಬಿಡುವ ಮೊದಲು ಸೇತುವೆಯ ಎರಡೂ ಬದಿಯಲ್ಲಿಯೂ ಗೇಟ್ ಹಾಕಲಾಗಿತ್ತು. ಸೈರನ್ ಮೊಳಗಿಸಲಾಗಿತ್ತು. ಆದರೆ ಜನರೆ ಗೇಟ್ ತೆಗೆದು ಸಂಚರಿಸಿದ್ದಾರೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.