ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ದೀಪಕ್ ರಾವ್ ಅವರ ಕಾಟಿಪಳ್ಳದ ನಿವಾಸಕ್ಕೆ ಶುಕ್ರವಾರ ಸಾಂತ್ವನ ಹೇಳಲು ಬಂದಿದ್ದ ಸ್ಥಳೀಯ ಶಾಸಕ ಮೊಯಿದ್ದೀನ್ ಬಾವಾ ಅವರನ್ನು, ದೀಪಕ್ ಕುಟುಂಬದವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಬಲಿಗರೊಂದಿಗೆ ಮನೆಗೆ ಬಂದ ಬಾವಾ ಅವರು ನೀಡಿದ ಪರಿಹಾರ ಹಣವನ್ನು ಸ್ವೀಕರಿಸಲು ನಿರಾಕರಿಸಿದ ದೀಪಕ್ ರಾವ್ ಕುಟುಂಬಸ್ಥರು 'ನಿನ್ನೆ ಬರಬೇಕಿತ್ತು ಅಂತ್ಯಕ್ರಿಯೆಗೆ, ಇಂದು ಯಾಕೆ ಬಂದಿದ್ದೀರಿ' ಎಂದು ಪ್ರಶ್ನಿಸಿದರು.
'ನಿನ್ನೆ ಉದ್ವಿಗ್ನ ಸ್ಥಿತಿ ಇದ್ದುದರಿಂದ ಶಾಂತಿ ಭಂಗವಾಗಬಹುದು ಎಂಬ ಕಾರಣಕ್ಕೆ ಪೊಲೀಸರು ಅಂತ್ಯಕ್ರಿಯೆಗೆ ಬರಬೇಡಿ ಎಂದಿದ್ದರು, ಹಾಗಾಗಿ ಬರಲಿಲ್ಲ, ನಾನು ಮನೆಯಲ್ಲೇ ದುಃಖತಪ್ತನಾಗಿ ಕುಳಿತಿದ್ದೆ' ಎಂದು ಬಾವಾ ಪ್ರತಿಕ್ರಿಯೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕುಟುಂಬದವರು, 'ನಿಮ್ಮ ಪರಿಹಾರವೂ ಬೇಡ. ಸಹಾಯವೂ ಬೇಡ' ಎಂದು ಹೇಳಿ, ಬಾವ ಅವರನ್ನು ವಾಪಸ್ ಕಳುಹಿಸಿದರು.