ಚಿತ್ರದುರ್ಗ: ‘ಇಲ್ಲಿನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ’ ಎಂದು ಚಿತ್ರನಟಿ, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಭಾವನಾ ಹೇಳಿದರು.
‘ತಾಯಿ ಬೇರು ಚಿತ್ರದುರ್ಗ. ನಾನೂ ನಗರದ ಬುರುಜನಹಟ್ಟಿಯ ಹುಡುಗಿ. ಇಲ್ಲಿಯವಳೇ ಆಗಿರುವುದರಿಂದ ಕೋಟೆ ನಾಡಿನಿಂದಲೇ ಸ್ಪರ್ಧಿಸಬೇಕು ಎಂದು ಇಲ್ಲಿಗೆ ಬಂದಿದ್ದೇನೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಮೂಲಕ ಪಕ್ಷ ಸಂಘಟಿಸಲು ಶ್ರಮಿಸುತ್ತೇನೆ. ನಾನು ಚಿತ್ರನಟಿಯಾಗಿರಲಿ, ಏನೇ ಆಗಿರಲಿ; ಅದು ಈವರೆಗಿನ ಪ್ರಾಮಾಣಿಕ ಪ್ರಯತ್ನದಿಂದ ಆಗಿರುವುದು. ಬದುಕು ಕಟ್ಟಿಕೊಳ್ಳಲು ಸುಳ್ಳು ಹೇಳಿಕೊಂಡು ಓಡಾಡುವ ಜಾಯಮಾನದವಳಲ್ಲ’ ಎಂದು ಹೇಳಿದರು.
‘ಹಿರಿಯರ ಮಾರ್ಗದರ್ಶನದಂತೆ ನಡೆದುಕೊಳ್ಳುವ ಪರಂಪರೆ ಕಾಂಗ್ರೆಸ್ನಲ್ಲಿದೆ. ಕೆಪಿಸಿಸಿ ಮುಖಂಡರು, ಕಾರ್ಯಕರ್ತರು, ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನ ಪಡೆದ ನಂತರ ಮುಂದಿನ ಹೆಜ್ಜೆ ಇಡುತ್ತೇನೆ’ ಎಂದರು.
ಒಂದು ರಾಜಕೀಯ ಪಕ್ಷ ಪರಿಪೂರ್ಣ ಆಗಬೇಕಾದರೆ ಮಹಿಳೆಯರಿಗೂ ಸಮಪಾಲು ನೀಡಬೇಕು. ಪುರುಷರಿಗೆ ಸಿಗುವಷ್ಟೇ ಮಹಿಳೆಯರಿಗೂ ಅವಕಾಶ ದೊರಕಬೇಕು ಎಂದು ಅಭಿಪ್ರಾಯಪಟ್ಟರು.