ಹಿರಿಯೂರು: ಮಕ್ಕಳಿಗೆ ವಿದ್ಯೆ, ಸಂಸ್ಕಾರ, ಸಂಸ್ಕೃತಿ ಕಲಿಸುವಲ್ಲಿ ಮಠಗಳ ಪಾತ್ರ ಬಹು ದೊಡ್ಡದು ಎಂದು ಕಲಬುರ್ಗಿಯ ಮರುಳ ಶಂಕರಮಠದ ಸಿದ್ದಬಸವ ಕಬೀರಸ್ವಾಮಿ ತಿಳಿಸಿದರು.
ತಾಲ್ಲೂಕಿನ ಐಮಂಗಲ ಗ್ರಾಮದಲ್ಲಿರುವ ಮಹಾಶಿವಶರಣ ಹರಳಯ್ಯ ಗುರುಪೀಠದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜ್ಞಾನದ ಬೆಳಕು ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಶರಣರ ವಚನಗಳು, ದಾಸರ ಕೀರ್ತನೆಗಳು, ತತ್ವಪದಗಳು ಸಾಮಾಜಿಕ ಪರಿವರ್ತನೆಯಲ್ಲಿ ಗಮನಾರ್ಹ ಪಾತ್ರ ವಹಿಸಿವೆ. ಸುಜ್ಞಾನದಿಂದ ಶಿವನ ಧ್ಯಾನ ಮಾಡಿದಾಗ ಮನಸ್ಸು ಪರಿಶುದ್ಧವಾಗುತ್ತದೆ. ಮೇಲು–ಕೀಳು ಭಾವನೆಗಳು ತೊಲಗಬೇಕು. ನ್ಯಾಯೋಚಿತವಾದ ಎಲ್ಲ ವೃತ್ತಿಗಳನ್ನು ಗೌರವಿಸಬೇಕು ಎಂದು ಅವರು ಸೂಚಿಸಿದರು.
ಗುರುಪೀಠದ ಅಧ್ಯಕ್ಷ ಬಸವ ಹರಳಯ್ಯ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಲ್ಲಿರುವ ಮೂಢನಂಬಿಕೆ, ಕಂದಾಚಾರ ಹೋಗಲಾಡಿಸಲು ಪ್ರತಿ ತಿಂಗಳು ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.