ಛತ್ರಪತಿ ಸಂಭಾಜಿನಗರ: 52 ವರ್ಷಗಳ ಹಿಂದೆ ಜಯಕವಾಡಿ ಅಣೆಕಟ್ಟು ನಿರ್ಮಾಣದ ವೇಳೆ ಹಾನಿಗೊಂಡಿದ್ದ 14ನೇ ಶತಮಾನದ ಶಿವ ದೇಗುಲವನ್ನು ಜೀರ್ಣೋದ್ಧಾರಗೊಳಿಸಲಾಗುವುದು ಎಂದು ಭಾರತೀಯ ಪುರಾತತ್ವ ಇಲಾಖೆ ಗುರುವಾರ ತಿಳಿಸಿದೆ.
‘ಮಹಾರಾಷ್ಟ್ರದಲ್ಲಿ ಇದೇ ಮೊದಲ ಬಾರಿಗೆ ಇಂತಹ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ’ ಎಂದು ಇಲಾಖೆ ಹೇಳಿದೆ.
‘ಶೆವ್ಟ ಮತ್ತು ಸಾವಖೇಡ ಗ್ರಾಮಗಳಲ್ಲಿದ್ದ ಎರಡು ದೇಗುಲಗಳು 1972ರಲ್ಲಿ ಅಣೆಕಟ್ಟು ನಿರ್ಮಾಣವಾದ ಬಳಿಕ ನೀರಿನಡಿ ಮುಳುಗಡೆಯಾಗಿದ್ದವು. ಆದರೆ, ದೇಗುಲದ ಕಲ್ಲುಗಳನ್ನು ಸಂರಕ್ಷಿಸಲಾಗಿತ್ತು’ ಎಂದು ತಿಳಿಸಿದೆ.
‘ಶೆವ್ಟದಲ್ಲಿನ ದೇಗುಲದ ಕಲ್ಲುಗಳಿಗೆ ಸಂಖ್ಯೆಗಳನ್ನು ನೀಡಲಾಗಿದ್ದು, ಇದರ ಆಧಾರದಲ್ಲಿ ದೇಗುಲ ಮರುನಿರ್ಮಾಣ ಮಾಡಲಾಗುವುದು. ರಾಜ್ಯ ಸರ್ಕಾರವು ₹3.53 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಎರಡು–ಮೂರು ತಿಂಗಳಲ್ಲಿ ಕಾಮಗಾರಿ ಆರಂಭವಾಗುತ್ತದೆ’ ಎಂದು ಮಾಹಿತಿ ನೀಡಿದೆ.
ಜಯಕವಾಡಿ ಅಣೆಕಟ್ಟು ನಿರ್ಮಾಣದ ಬಳಿಕ ಸುಮಾರು 100 ಗ್ರಾಮಗಳು ಜಲಾವೃತಗೊಂಡಿದ್ದವು.