ಶ್ರೀನಗರ:19ನೇ ‘ಕಾರ್ಗಿಲ್ ವಿಜಯ್ ದಿವಸ್’ ಆಚರಣೆಗೆ ಜಮ್ಮು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಡ್ರಾಸ್ನಲ್ಲಿ ಮಂಗಳವಾರ ಚಾಲನೆ ನೀಡಲಾಗಿದೆ. ಇದರ ಅಂಗವಾಗಿ ಬೋಫೋರ್ಸ್ ಫಿರಂಗಿಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.
ಡ್ರಾಸ್ನಲ್ಲಿರುವ ವಿಜಯ ಸ್ಮಾರಕ ಆವರಣದಲ್ಲಿ ಈ ಪ್ರದರ್ಶನ ಏರ್ಪಡಿಸಲಾಗಿದ್ದು, ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಇದೇ ವೇಳೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮೂರು ದಿನಗಳ ಕಾಲ ನಡೆಯುವ ಈ ವಿಜಯೋತ್ಸವದಲ್ಲಿ ಬುಧವಾರ ‘ಅಪರೇಷನ್ ವಿಜಯ್ ಬ್ಯಾಟಲ್ಸ್’ ಮತ್ತು ಲೇಸರ್ ಪ್ರದರ್ಶನವನ್ನು ಸಹ ಏರ್ಪಡಿಸಲಾಗಿದೆ. ಜುಲೈ 26ರ ಗುರವಾರ ಕೊನೆಯ ದಿನದ ಕಾರ್ಯಕ್ರಮ ನಡೆಯಲಿದೆ. ಪ್ರತಿ ವರ್ಷ ಜುಲೈ 26ರಂದು ‘ವಿಜಯ್ ದಿವಸ್’ ಆಚರಿಸಲಾಗುತ್ತದೆ.
19 ವರ್ಷಗಳ ಹಿಂದೆ ಭಾರತದ ಗಡಿಪ್ರದೇಶ ಕಾರ್ಗಿಲ್ನಲ್ಲಿ ಅಘೋಷಿತ ಯುದ್ಧವನ್ನು ಸಾರುವ ಮೂಲಕ ದೇಶದ ವೀರಯೋಧರನ್ನು ಬಲಿತೆಗೆದುಕೊಂಡ ಪಾಕಿಸ್ತಾನಕ್ಕೆ ಭಾರತದ ಸೇನೆಯು ತಕ್ಕ ಪ್ರತ್ಯುತ್ತರ ನೀಡಿದ ಇತಿಹಾಸದ ಪ್ರಯುಕ್ತ ‘ಕಾರ್ಗಿಲ್ ವಿಜಯೋತ್ಸವ’ವನ್ನು ಆಚರಿಸಲಾಗುತ್ತಿದೆ.
Kargil Vijay Diwas: #Visuals of Bofors Guns Demonstration from Kargil's Dras. #JammuAndKashmir pic.twitter.com/2zYzvFJSjV
— ANI (@ANI) July 24, 2018
ಕಾರ್ಗಿಲ್ ಯುದ್ಧ 1999ರ ಮೇನಲ್ಲಿ ಆರಂಭವಾಗಿ ಎರಡು ತಿಂಗಳ ಕಾಲ ನಡೆದಿದ್ದು, ಪಾಕ್ ಸೇನೆ ವಿರುದ್ಧ ಭಾರತೀಯ ಸೇನೆ ಸೆಣಸಾಡಿತು. ಶ್ರೀನಗರದ ಲೇಹ್ನ ಹೆದ್ದಾರಿವರೆಗೆ ಆಕ್ರಮಿಸಿಕೊಂಡಿದ್ದ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಯಿತು. ಈ ವೇಳೆ ಸೇನೆಯ ಅಧಿಕಾರಿಗಳು ಸೇರಿದಂತೆ 490 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.
ಶ್ರೀನಗರದಿಂದ 150 ಕಿ.ಮೀ.ದೂರದಲ್ಲಿರುವ ಡ್ರಾಸ್ಗೆ ತಲುಪಲು ಬರೋಬ್ಬರಿ 6-7ಗಂಟೆಯ ಪ್ರಯಾಣ. ನೀರವ ಮೌನ, ರುದ್ರರಮಣೀಯ ಅರಣ್ಯ, ಪರ್ವತ ತುದಿಗಳ ತಿರುವುಗಳಿರುವ ರಸ್ತೆ ಅದು. 19 ವರ್ಷಗಳ ಹಿಂದೆ ಕಾರ್ಗಿಲ್ ಸಮರದ ಸಮಯದಲ್ಲಿ ಭಾರತೀಯ ಸೇನೆಗೆ ಸೇರಿದ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಚಲಿಸಿದ್ದವು.
ಟೈಗರ್ ಹಾಗೂ ಟೊಲೊಲಿಂಗ್ ಪರ್ವತಗಳ ಮೇಲೆ ನಿಯಂತ್ರಣ ಸಾಧಿಸಲು ಡ್ರಾಸ್ ಮೈದಾನದಿಂದಲೇ ಭಾರತ ಯುದ್ಧ ಆರಂಭಿಸಿತ್ತು. ಪಾಕ್ ಪಡೆಗಳು ಲಡಾಖ್ ಪ್ರದೇಶದಿಂದ ಸಂಪರ್ಕ ಕಡಿಯಲು ರಾಷ್ಟ್ರೀಯ ಹೆದ್ದಾರಿಯ ಮೇಲೆ ಗುಂಡಿನ ದಾಳಿ ನಡೆಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.