ಹೈದರಾಬಾದ್: ರೈಲ್ವೆಯಲ್ಲಿ ಭಾನುವಾರ ರಾತ್ರಿ ತೀವ್ರ ಅಸ್ವಸ್ಥಗೊಂಡ ಮಗುವಿನ ನೆರವಿಗೆ ಧಾವಿಸುವಂತೆ ಕಳಿಸಿದ ಟ್ವಿಟರ್ ಸಂದೇಶಕ್ಕೆ ಪ್ರಧಾನಿ ಕಚೇರಿ ತಕ್ಷಣ ಸ್ಪಂದಿಸಿ ವೈದ್ಯಕೀಯ ನೆರವು ಒದಗಿಸಿದರೂ ಮಗುವನ್ನು ಬದುಕಿಸಿಕೊಳ್ಳಲಾಗಲಿಲ್ಲ.
ಯಶವಂತಪುರ–ಪುರಿ ಗರೀಬ್ ರಥ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪಶ್ಚಿಮ ಬಂಗಾಳದ ದಂಪತಿಯ ನಾಲ್ಕು ತಿಂಗಳ ಮಗುವಿನ ಆರೋಗ್ಯದಲ್ಲಿ ಏರುಪೇರಾಯಿತು. ಅಲ್ಲಿಯೇ ಇದ್ದ ಬಿಹಾರದ ಸನ್ನಿ ಎಂಬ ಸಹ ಪ್ರಯಾಣಿಕ ನೆರವು ಕೋರಿ ರೈಲ್ವೆ ಸಚಿವಾಲಯ ಮತ್ತು ಪ್ರಧಾನಿ ಕಚೇರಿಗೆ ಟ್ವಿಟರ್ ಸಂದೇಶ ಕಳಿಸಿದರು.
ಅವರ ಸಮಯ ಪ್ರಜ್ಞೆ ಕೆಲಸ ಮಾಡಿತ್ತು. ಸಂದೇಶಕ್ಕೆ ಸ್ಪಂದಿಸಿದ ಪ್ರಧಾನಿ ಕಚೇರಿಯು ವಿಶಾಖಪಟ್ಟಣ ರೈಲು ನಿಲ್ದಾಣದ ಸಿಬ್ಬಂದಿಗೆ ವಿಷಯ ತಲುಪಿಸಿ, ವೈದ್ಯಕೀಯ ತಂಡದೊಂದಿಗೆ ಸಜ್ಜಾಗಿರುವಂತೆ ಸೂಚಿಸಿತ್ತು.
ರಾತ್ರಿ 10ಕ್ಕೆ ಇದು ನಡೆದಾಗ ರೈಲು ಅಂಕಲಪಲ್ಲಿ ನಿಲ್ದಾಣದಲ್ಲಿತ್ತು. ಅಲ್ಲಿಂದ ರೈಲು 29 ಕಿ.ಮೀ ದೂರದ ವಿಶಾಖಪಟ್ಟಣ ತಲುಪುವ ವೇಳೆಗಾಗಲೇ ಆಂಬುಲೆನ್ಸ್ನೊಂದಿಗೆ ವೈದ್ಯಕೀಯ ಸಿಬ್ಬಂದಿ ಸಿದ್ಧವಾಗಿ ನಿಂತಿದ್ದರು. ಆದರೆ, ಅಷ್ಟೊತ್ತಿಗಾಗಲೇ ಮಗು ಕೊನೆಯುಸಿರೆಳೆದಿತ್ತು.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ಹೌರಾ ಜಿಲ್ಲೆಯ ಅಶೋಕ್ ಮಂಡಲ ದಂಪತಿ ಚಿಕಿತ್ಸೆಗಾಗಿ ಪುಟ್ಟಪರ್ತಿಯ ಶ್ರೀ ಸತ್ಯಸಾಯಿ ಆಸ್ಪತ್ರೆಗೆ ಕರೆ ತಂದಿದ್ದರು. ಮಗುವಿನ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ವೈದ್ಯರೂ ಕೈಚೆಲ್ಲಿದ್ದರು. ಮಗುವಿನೊಂದಿಗೆ ದಂಪತಿ ಊರಿಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ.