ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೈದರಾಬಾದ್‌: ₹45 ಕೋಟಿ ಮೌಲ್ಯದ ಆಸ್ತಿ ಪತ್ತೆ– ಎಸಿಪಿ ಬಂಧನ

13 ಸ್ಥಳಗಳಲ್ಲಿ ದಾಳಿ ನಡೆಸಿದ್ದ ತೆಲಂಗಾಣ ಎಸಿಬಿ ಅಧಿಕಾರಿಗಳು
Published 22 ಮೇ 2024, 15:50 IST
Last Updated 22 ಮೇ 2024, 15:50 IST
ಅಕ್ಷರ ಗಾತ್ರ

ಹೈದರಾಬಾದ್‌: ಹೈದರಾಬಾದ್‌ನ ಕೇಂದ್ರ ಅಪರಾಧ ಠಾಣೆಯಲ್ಲಿ (ಸಿಸಿಎಸ್) ಆರ್ಥಿಕ ಅಪರಾಧಗಳ ವಿಭಾಗದಲ್ಲಿ (ಇಒಡಬ್ಲ್ಯು) ಕರ್ತವ್ಯ ನಿರ್ವಹಿಸುತ್ತಿದ್ದ ಸಹಾಯಕ ಪೊಲೀಸ್‌ ಆಯುಕ್ತ (ಎಸಿಪಿ) ಟಿ.ಎಸ್. ಉಮಾಮಹೇಶ್ವರ್ ರಾವ್ ಅವರನ್ನು ಆದಾಯ ಮೀರಿದ ಆಸ್ತಿ ಹೊಂದಿರುವ ಆರೋಪದಲ್ಲಿ ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದೆ. 

ರಾವ್‌ ಅವರಿಗೆ ಸಂಬಂಧಿಸಿದ 13 ಸ್ಥಳಗಳಲ್ಲಿ ಮಂಗಳವಾರ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು, ಮಾರುಕಟ್ಟೆ ಮೌಲ್ಯದ ಸುಮಾರು ₹ 45 ಕೋಟಿ ಮೌಲ್ಯದ ಆಸ್ತಿ ಮತ್ತು ಚಿನ್ನ ಪತ್ತೆ ಮಾಡಿದ್ದಾರೆ. ತಪಾಸಣೆ ವೇಳೆ ಎಸಿಬಿ ಬಳಿ ಇದ್ದ ನಗದು, ಜಮೀನುಗಳ ದಾಖಲೆ ಪತ್ರ, ಚಿನ್ನ, ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಸೊತ್ತುಗಳಲ್ಲಿ ₹37 ಲಕ್ಷ ನಗದು, 60 ತೊಲ ಚಿನ್ನ ಮತ್ತು ₹3.40 ಕೋಟಿ ಮೌಲ್ಯದ ಆಸ್ತಿ ಸೇರಿದೆ. ರಾವ್ ಅವರ ಒಟ್ಟು ಆಸ್ತಿಯ ಅಂದಾಜು ಮೌಲ್ಯ ಸುಮಾರು ₹50 ಕೋಟಿ ಇದೆ ಎಂದು ಎಸಿಬಿ ಮೂಲಗಳು ಹೇಳಿವೆ.

ವಿಶಾಖಪಟ್ಟಣ ಸಮೀಪದ ಘಟಕೇಸರ್ ಮತ್ತು ಚೋಡವರಂನಲ್ಲಿನ ಜಮೀನುಗಳು, ಅಶೋಕ್ ನಗರದಲ್ಲಿ ಫ್ಲಾಟ್‌ಗಳು ಮತ್ತು ಶಮೀರ್‌ಪೇಟೆ, ಕುಕಟ್‌ಪಲ್ಲಿ ಮತ್ತು ಮಲ್ಕರಾಜ್‌ಗಿರಿಯಲ್ಲಿನ ಜಮೀನುಗಳು ಸೇರಿದಂತೆ 17 ಆಸ್ತಿಗಳನ್ನು ರಾವ್‌ ಹೊಂದಿರುವುದನ್ನು ಪತ್ತೆ ಹಚ್ಚಲಾಗಿದೆ.

ರಾವ್‌ ಅವರು  ಕರ್ತವ್ಯ ನಿರ್ವಹಿಸುವ ವೇಳೆ ದುರ್ವರ್ತನೆ ತೋರಿರುವುದಕ್ಕಾಗಿ ಈ ಹಿಂದೆ ಮೂರು ಬಾರಿ ಅಮಾನತುಗೊಂಡಿದ್ದರು. ಅವರು ₹1,500 ಕೋಟಿಯ ‘ಸಾಹಿಥಿ ಇನ್ಫ್ರಾ‘ ಹಗರಣದ ತನಿಖಾಧಿಕಾರಿಯಾಗಿದ್ದರು. ಈ ಹಗರಣವನ್ನು ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT