ನವದೆಹಲಿ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ದಶ ಪಥಗಳ ಆರ್ಥಿಕ ಕಾರಿಡಾರ್ ನಿರ್ಮಾಣ ಕಾಮಗಾರಿಯನ್ನು 2022ರಅಕ್ಟೋಬರ್ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಬುಧವಾರ ತಿಳಿಸಿದರು.
‘10 ಪಥಗಳ ಬೆಂಗಳೂರು-ಮೈಸೂರು ಆರ್ಥಿಕ ಕಾರಿಡಾರ್ ಅನ್ನು ದಾಖಲೆಯ ವೇಗದಲ್ಲಿ ನಿರ್ಮಿಸಲಾಗುತ್ತಿದೆ. ₹8,172 ಕೋಟಿ ವೆಚ್ಚದ ಆರ್ಥಿಕ ಕಾರಿಡಾರ್ 2022ರಅಕ್ಟೋಬರ್ ಒಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಇದು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಈಗಿನ 3 ಗಂಟೆಯಿಂದ ಒಂದೂವರೆ ಗಂಟೆಗೆ (90 ನಿಮಿಷಕ್ಕೆ) ತಗ್ಗಿಸುತ್ತದೆ’ ಎಂದು ಗಡ್ಕರಿ ಟ್ವೀಟ್ ಮಾಡಿದ್ದಾರೆ.
ಎರಡು ನಗರಗಳ ನಡುವಿನ ರಸ್ತೆ ಯೋಜನೆಯನ್ನು ಭಾರತಮಾಲಾ ಪರಿಯೋಜನ ಹಂತ -1ರ ಅಡಿಯಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಈ ಯೋಜನೆಯನ್ನು ಎರಡು ಪ್ಯಾಕೇಜ್ಗಳಾಗಿ ಕೈಗೆತ್ತಿಕೊಳ್ಳಲಾಗಿದ್ದು, ಮೊದಲನೆಯ ಪ್ಯಾಕೇಜ್ನಲ್ಲಿ ಬೆಂಗಳೂರಿನಿಂದ ಮದ್ದೂರು ತಾಲ್ಲೂಕಿನ ನಿಡಘಟ್ಟವರೆಗೆ ಮತ್ತು ಎರಡನೆಯ ಪ್ಯಾಕೇಜ್ನಲ್ಲಿ ನಿಡಘಟ್ಟದಿಂದ ಮೈಸೂರಿನವರೆಗೆ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.