ಫರೀದಾಬಾದ್: ಗೋರಕ್ಷಕ ಬಿಟ್ಟು ಬಜರಂಗಿ ಅವರ ತಮ್ಮ ಮಹೇಶ್ ಪಾಂಚಾಲ್ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಗಾಯಗೊಂಡಿರುವ ಮಹೇಶ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದರು.
ಗೋರಕ್ಷಾ ಬಜರಂಗ ದಳದ ರಾಷ್ಟ್ರೀಯ ಅಧ್ಯಕ್ಷ ಬಜರಂಗಿ ಅಲಿಯಾಸ್ ರಾಜ್ಕುಮಾರ್ ಅವರು ನೂಹ್ ಹಿಂಸಾಚಾರ ಪ್ರಕರಣದಲ್ಲಿ ಬಂಧನದಲ್ಲಿದ್ದಾರೆ.
ಮಹೇಶ್ ಅವರ ಮೇಲೆ ಐವರ ಗುಂಪು ಬುಧವಾರ ರಾತ್ರಿ ಇಲ್ಲಿನ ಬಾಬಾ ಮಂಡಿ ಸಮೀಪ ದಾಳಿ ನಡೆಸಿದೆ. ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದೆ ಎಂದು ತಿಳಿಸಿದರು.
‘ಈ ಕುರಿತ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಪೊಲೀಸರ ತಂಡ ಆಸ್ಪತ್ರೆಗೆ ತೆರಳಿ ಪಾಂಚಾಲ್ ಅವರಿಂದ ಘಟನೆ ಬಗ್ಗೆ ವರದಿ ಪಡೆಯಿತು. ನಂತರ ಘಟನಾಸ್ಥಳದ ಪರಿಶೀಲನೆ ನಡೆಸಿತು’ ಎಂದು ಮಾಹಿತಿ ನೀಡಿದರು.
ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.