ಹೈದರಾಬಾದ್: ತೆಲಂಗಾಣದಲ್ಲಿ ಬಿಜೆಪಿ ಗೆದ್ದು ಸರ್ಕಾರ ರಚಿಸಿದರೆ ರಾಜ್ಯದ ಎಲ್ಲರಿಗೂ ಅಯೋಧ್ಯ ರಾಮಮಂದಿರ ಯಾತ್ರೆಗೆ ಉಚಿತವಾಗಿ ವ್ಯವಸ್ಥೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಭರವಸೆ ನೀಡಿದರು.
ರಾಜ್ಯದ ಗಡ್ವಾಲ್ನಲ್ಲಿ ಚುನಾವಣಾ ರ್ಯಾಲಿ ನಡೆಸಿದ ಅವರು, ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ 70 ವರ್ಷಗಳ ಕಾಲ ತಡೆಯೊಡ್ಡಿತು ಎಂದು ಆರೋಪಿಸಿದರು.
ಮುಸ್ಲಿಮರಿಗೆ ಧರ್ಮಾಧಾರಿತವಾಗಿ ಮೀಸಲಾತಿ ನೀಡಲಾಗುವುದು ಎಂದು ಬಿಆರ್ಎಸ್ ಮುಖ್ಯಸ್ಥ, ರಾಜ್ಯದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ನೀಡಿರುವ ಆಶ್ವಾಸನೆಯನ್ನು ಟೀಕಿಸಿದ ಅವರು, ಈ ರೀತಿಯ ಕ್ರಮವು ‘ಸಂವಿಧಾನ ವಿರೋಧಿ’ ಆಗಿದೆ ಎಂದರು.
ಬಿಜೆಪಿಯು ಧರ್ಮಾಧಾರಿತ ಮೀಸಲಾತಿಯನ್ನು ರದ್ದುಪಡಿಸಿ ಇತರ ಹಿಂದುಳಿದ ವರ್ಗ (ಒಬಿಸಿ) ಮತ್ತು ಪರಿಶಿಷ್ಟ ವರ್ಗಗಳ (ಎಸ್ಟಿ) ಮೀಸಲಾತಿಯನ್ನು ಹೆಚ್ಚಿಸಲಿದೆ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹಿಂದುಳಿದ ವರ್ಗಗಳ ವಿರೋಧಿ ಎಂದು ಕರೆದ ಅವರು, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಹಿಂದುಳಿದ ವರ್ಗಗಳ ಕಲ್ಯಾಣ ಸಾಧ್ಯ ಎಂದರು. ಜೊತೆಗೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳ ನಾಯಕನನ್ನೇ ಮುಖ್ಯಮಂತ್ರಿ ಮಾಡಲಾಗುವುದು ಎಂದರು.