ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಬಿಆರ್ಎಸ್ ನಾಯಕಿ ಕವಿತಾ ಕೆ., ಮಂಗಳವಾರ ಹಾಜರಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಚಾರಣೆಗೆ ಹಾಜರಾಗದಿರುವುದನ್ನು ಇ ಮೇಲ್ ಮೂಲಕ ತನಿಖಾಧಿಕಾರಿಗೆ ತಿಳಿಸಿದ್ದಾರೆ ಎಂಬುದು ತಿಳಿದುಬಂದಿದೆ.
‘ಈ ಪ್ರಕರಣದಲ್ಲಿ ಕವಿತಾ ಅವರಿಗೆ ಇ.ಡಿ ಸಮನ್ಸ್ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ’ ಎಂದು ವಕೀಲ ನಿತೇಶ್ ರಾಣಾ ತಿಳಿಸಿದ್ದಾರೆ.
‘ವಿಧಾನ ಪರಿಷತ್ ಸದಸ್ಯೆಯು ಕಳೆದ ವರ್ಷ ನ್ಯಾಯಾಲಯದಿಂದ ತಾತ್ಕಾಲಿಕ ಪರಿಹಾರವನ್ನಷ್ಟೇ ಪಡೆದಿದ್ದರು. ಇದೀಗ ಅದು ಮಾನ್ಯವಲ್ಲ. ಶೀಘ್ರದಲ್ಲೇ ಮತ್ತೆ ಸಮನ್ಸ್ ನೀಡಲಾಗುವುದು. ಈ ಬಗ್ಗೆ ಪರಿಶೀಲನೆ ನಡೆದಿದೆ’ ಎಂದು ಇ.ಡಿ ಮೂಲಗಳು ತಿಳಿಸಿವೆ.