ಜುನಾಗಡ (ಸೌರಾಷ್ಟ್ರ): 2017ರ ರಾಜ್ಯಸಭೆ ಚುನಾವಣೆಯ ಸಂದರ್ಭದಲ್ಲಿ ಪಕ್ಷ ಬದಲಾಯಿಸಲು ಬಿಜೆಪಿಯಿಂದ ತನಗೆ ₹40 ಕೋಟಿ ಆಫರ್ ಬಂದಿತ್ತು ಎಂದು ವಿಸಾವದರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರ್ಷದ್ಕುಮಾರ್ ರಿಬದಿಯಾ ಬುಧವಾರ ಆರೋಪಿಸಿದ್ದಾರೆ.
ಪಕ್ಷವನ್ನು ಯಾರು ತೊರೆಯುತ್ತಾರೆ ಎಂಬುದು ನನಗೆ ಗೊತ್ತಿದೆ ಎಂದು ಗುಜರಾತ್ ಕಾಂಗ್ರೆಸ್ ಉಸ್ತುವಾರಿ ರಘು ಶರ್ಮಾ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಹರ್ಷದ್ ಈ ರೀತಿಯಾಗಿ ಹೇಳಿದ್ದಾರೆ.
2017ರ ರಾಜ್ಯಸಭೆ ಚುನಾವಣೆ ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷಾಂತರ ಮಾಡಲು ಅಧಿಕಾರದಲ್ಲಿದ್ದ ಬಿಜೆಪಿಯಿಂದ ₹40 ಕೋಟಿ ಆಫರ್ ಬಂದಿತ್ತು. ಆಗ ಆಫರ್ ನಿರಾಕರಿಸಿದ ನಾನು ಈಗ ಏಕೆ ಪಕ್ಷ ತೊರೆಯಲಿ ಎಂದು ಹೇಳಿದ್ದಾರೆ.
ಚುನಾವಣೆ ವೇಳೆಯಲ್ಲಿ ಇಂತಹ ಆರೋಪಗಳು ಸಹಜ. ಆದರೆ ನಾನು ಪಕ್ಷವನ್ನು ತೊರೆಯುವುದಿಲ್ಲ ಎಂದು ಹರ್ಷದ್ ಹೇಳಿದರು.
ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವ ಹಾರ್ದಿಕ್ ಪಟೇಲ್, ವಿಧಾನಸಭೆ ಚುನಾವಣೆಗೂ ಮುನ್ನ ಮತ್ತಷ್ಟು ಶಾಸಕರು, ನಾಯಕರು ಪಕ್ಷ ತೊರೆಯುವುದಾಗಿ ಹೇಳಿಕೆ ನೀಡಿದ್ದರು.