ನವದೆಹಲಿ: ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷವು ಭಾನುವಾರ ‘ಅಬ್ ಹೋಗಾ ನ್ಯಾಯ್’ ಎಂಬ ಧ್ಯೇಯ ವಾಕ್ಯದೊಂದಿಗೆ ಚುನಾವಣಾ ಪ್ರಚಾರ ಗೀತೆ ಬಿಡುಗಡೆ ಮಾಡಿದೆ. ಆದರೆ, ಇದಕ್ಕೂ ಮೊದಲು ಚುನಾವಣೆ ಆಯೋಗವು ಆಕ್ಷೇಪವೆತ್ತಿದ್ದ ಕೆಲ ಸಾಲುಗಳನ್ನು ತೆಗೆದು ಹಾಕಿದೆ.
ಈ ಹಾಡಿನಲ್ಲಿ ಕಾಂಗ್ರೆಸ್ನ ಪ್ರಸ್ತಾವಿತ ‘ಕನಿಷ್ಠ ಆದಾಯ’ ಕಾರ್ಯಕ್ರಮ ‘ನ್ಯಾಯ್’ಅನ್ನು ಪ್ರಮುಖವಾಗಿ ಬಿಂಬಿಸಲಾಗಿದೆ. ಇದರ ಜತೆಗೇ ಹಾಡಿನಲ್ಲಿ ರೈತರ ಸಮಸ್ಯೆಗಳು, ನಿರುದ್ಯೋಗ, ನೋಟು ರದ್ದು, ಮಹಿಳಾ ಭದ್ರತೆ ಮತ್ತು ಜಿಎಸ್ಟಿ ಕುರಿತುಉಲ್ಲೇಖಗಳಿವೆ.
ಆದರೆ, ಈ ಮೊದಲು ಹಾಡಿನ ಕೆಲ ಸಾಲುಗಳ ಬಗ್ಗೆ ಚುನಾವಣೆ ಆಯೋಗ ಆಕ್ಷೇಪವೆತ್ತಿತ್ತು. ತಾನು ಸೂಚಿಸಿರುವ ನಿರ್ದಿಷ್ಟ ಸಾಲುಗಳನ್ನು ತೆಗೆದು ಹಾಕುವಂತೆಯೂ ಕಾಂಗ್ರೆಸ್ಗೆ ತಾಕೀತು ಮಾಡಿತ್ತು. ಭಾರತದ ಕೋಮು ಸಾಮರಸ್ಯ ಹಾಳಾಗಿದೆ ಎಂದು ಉಲ್ಲೇಖವಾಗಿದ್ದ ಸಾಲುಗಳನ್ನು ತೆಗೆಯುವಂತೆ ಹೇಳಲಾಗಿತ್ತು. ಕೇಂದ್ರದ ಎನ್ಡಿಎ ಸರ್ಕಾರ ಸಮಾಜದಲ್ಲಿ ಧ್ವೇಷ ಹರಡುತ್ತಿದೆ ಎಂದು ಆ ಸಾಲುಗಳು ಆರೋಪಿಸುವಂತಿದ್ದವು ಎನ್ನಲಾಗಿದೆ.
ಚುನಾವಣೆ ಆಯೋಗದ ಸೂಚನೆ ಮೇರೆಗೆ ಕಾಂಗ್ರೆಸ್ ತನ್ನ ಪರಿಷ್ಕೃತ ಚುನಾವಣಾ ಪ್ರಚಾರ ಗೀತೆಯನ್ನು ಇಂದು ಬಿಡುಗಡೆ ಮಾಡಿದೆ.