ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಭಾಷಾ ಪಂಡಿತ, ರಾಜಕೀಯ ‘ಚಾಣಕ್ಯ’ ಪಿ.ವಿ. ನರಸಿಂಹರಾವ್‌ಗೆ ‘ಭಾರತ ರತ್ನ’

Published 9 ಫೆಬ್ರುವರಿ 2024, 15:55 IST
Last Updated 9 ಫೆಬ್ರುವರಿ 2024, 15:55 IST
ಅಕ್ಷರ ಗಾತ್ರ

ನವದೆಹಲಿ: ಬಹುಭಾಷಾ ಪಂಡಿತ, ರಾಜಕೀಯ ಮುತ್ಸದ್ಧಿ, ವಿದ್ವಾಂಸ, ಭಾರತದ ರಾಜಕಾರಣದ ಚಾಣಕ್ಯ... ಹೀಗೆ ವಿಶೇಷಣಗಳಿಂದ ಗುರುತಿಸಲ್ಪಡುವ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರೀಗ ಭಾರತರತ್ನ.

ರಾಜಕೀಯ ವಲಯದಲ್ಲಿ ಪಿವಿಎನ್ ಎಂದೇ ಹೆಸರಾಗಿದ್ದ ಅವರಿಗೆ ಈ ಎಲ್ಲ ವಿಶೇಷಣಗಳು ಸಲ್ಲುತ್ತಿದ್ದವು. ಅವರು 1991–1996ರ ಅವಧಿಯಲ್ಲಿ ಪ್ರಧಾನಿಯಾಗಿದ್ದರು. ನಿಧನವಾದ 19 ವರ್ಷದ ಬಳಿಕ ದೇಶದ ಅತ್ಯುನ್ನತ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ.

ಪಿವಿಎನ್‌ ಅವರು ದಕ್ಷಿಣ ಭಾರತದಿಂದ ಪ್ರಧಾನಿ ಸ್ಥಾನಕ್ಕೇರಿದ ಮೊದಲಿಗರು. ಹಾಗೆಯೇ, ನೆಹರೂ–ಗಾಂಧಿ ಕುಟುಂಬಕ್ಕೆ ಹೊರತಾಗಿ ಆ ಸ್ಥಾನಕ್ಕೇರಿದ ಹಾಗೂ ಐದು ವರ್ಷ ಪೂರ್ಣ ಅಧಿಕಾರ ಅವಧಿ ಪೂರ್ಣಗೊಳಿಸಿದ ಪ್ರಥಮ ಕಾಂಗ್ರೆಸ್ ನಾಯಕರು ಹೌದು.

1990ರ ದಶಕ ದೇಶವನ್ನು ಪ್ರಕ್ಷುಬ್ಧ ಸ್ಥಿತಿ ಆವರಿಸಿದ್ದ ಕಾಲ. ಕಠಿಣ ಸಂದರ್ಭಗಳನ್ನು ನಿಭಾಯಿಸುವ ರಾಜಕೀಯ ಜಾಣ್ಮೆಯನ್ನು ತೋರುತ್ತಲೇ, ಆರ್ಥಿಕ ಸುಧಾರಣೆ ಕಾರ್ಯಕ್ರಮಗಳಿಗೂ ಒತ್ತು ನೀಡಿದರು. ಬಾಬರಿ ಮಸೀದಿ ನೆಲಸಮ ಕೃತ್ಯ, ಕೇಸರಿ ಪಡೆಗಳು ಬೇರೂರಿದ ಬೆಳವಣಿಗೆಗಳು 5 ವರ್ಷಗಳಲ್ಲಿ ಘಟಿಸಿದವು. ದೇಶ ಆರ್ಥಿಕ ಪ್ರಗತಿಯ ಹೊಸ ಹಾದಿ ಕಂಡುಕೊಂಡ ಅವಧಿಯೂ ಹೌದು.

ಕುಶಾಗ್ರಮತಿ, ರಾಜಕೀಯ ವಿದ್ವತ್ತಿಗೆ ಹೆಸರಾಗಿದ್ದ ಪಿವಿಎನ್‌ ಅವರಿಗೆ ಒಂಬತ್ತು ಭಾಷೆ ಬರುತ್ತಿದ್ದವು. 1992ರ ಬಾಬರಿ ಮಸೀದಿ ನೆಲಸಮದ ಬಳಿಕ, ಉರ್ದುವಿನಲ್ಲಿಯೇ ಮುಸ್ಲಿಂ ಮೌಲ್ವಿಗಳನ್ನು ಸರಳವಾಗಿ ಮನವೊಲಿಸಿದ್ದರು. ಅದೇ ವಾರದಲ್ಲಿ ತಮ್ಮ ನಿವಾಸದಲ್ಲಿ ಐಎಎಸ್‌ ಪ್ರೊಬೇಷನರಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಭಗವದ್ಗೀತೆಯ ಶ್ಲೋಕಗಳನ್ನೂ ಉಲ್ಲೇಖಿಸಿದ್ದರು.

ಪ್ರಧಾನಿ ಸ್ಥಾನ ಅಲಂಕರಿಸುವ ಮುನ್ನಾ ದಿನ ಭಾವುಕರಾಗಿದ್ದರು. ತುಂಬಾ ಖುಷಿಯಾಗುತ್ತಿದೆ. ಅದೇ ಸಮಯದಲ್ಲಿ ದೈತ್ಯದೇಹಿಯಾಗಿರುವ ಅನುಭವವೂ ಆಗುತ್ತಿದೆ ಎಂದು ಹೇಳಿದ್ದರು. ಪಿವಿಎನ್‌ ಅವರ ಅನಿಶ್ಚಿತ ಸೈದ್ಧಾಂತಿಕ ನಿಲುವು ಉಲ್ಲೇಖಿಸಿ ಮಣಿಶಂಕರ್‌ ಅಯ್ಯರ್ ಒಮ್ಮೆ ಪಿವಿಎನ್‌ ಅವರನ್ನು ‘ದೇಶದ ಮೊದಲ ಬಿಜೆಪಿ ಪ್ರಧಾನಿ’ ಎಂದೂ ಬಣ್ಣಿಸಿದ್ದರು.  

ಅವಿಭಜಿತ ಆಂಧ್ರಪ್ರದೇಶದ ಕರೀಂನಗರ ಜಿಲ್ಲೆಯ ವಂಗರ ಗ್ರಾಮದ ಕೃಷಿಕ ಕುಟುಂಬದಲ್ಲಿ ಜೂನ್ 28, 1921ರಲ್ಲಿ ಜನಿಸಿದರು. ಒಸ್ಮಾನಿಯಾ, ಬಾಂಬೆ ಮತ್ತು ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು. ಓದಿದ್ದು ಬಿ.ಎಸ್ಸಿ, ಕಾನೂನು ಪದವಿ.

ಕಾಲೇಜಿನಲ್ಲಿ ‘ವಂದೇ ಮಾತರಂ’ ಹಾಡದಂತೆ ನಿರ್ಬಂಧಿಸಿದ್ದ ನಿಜಾಂ ಸರ್ಕಾರದ ವಿರುದ್ಧ ಪ್ರತಿಭಟಿಸುವ ಮೂಲಕ 1938ರಲ್ಲಿ ಸಾರ್ವಜನಿಕ ಜೀವನ ಆರಂಭಿಸಿದರು. ನೆಹರೂ–ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದರು.

1980ರ ದಶಕದ ವಿವಿಧ ಸಂದರ್ಭದಲ್ಲಿ ಕೇಂದ್ರದಲ್ಲಿ ವಿದೇಶಾಂಗ ವ್ಯವಹಾರ, ರಕ್ಷಣೆ, ಗೃಹ ಸಚಿವರಾಗಿ ಹೊಣೆಗಾರಿಕೆ ನಿಭಾಯಿಸಿದ್ದರು. ರಾಜೀವ್‌ಗಾಂಧಿ ಅವರ ಹತ್ಯೆಯ ಬಳಿಕ ಸರ್ವಾನುಮತದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರು. ಈ ಹೊಣೆಗಾರಿಕೆಯೇ ಚುನಾವಣೆಯ ಬಳಿಕ ಅವರನ್ನು ಪ್ರಧಾನಿ ಸ್ಥಾನಕ್ಕೂ ಒಯ್ದಿತು.

ಆರಂಭದಲ್ಲಿ ಅಲ್ಪಮತದ ಸರ್ಕಾರ ಮುನ್ನಡೆಸಿದ್ದರು. ಚರ್ಚಾಸ್ಪದವಾದ ಕೆಲ ಸಂದರ್ಭಗಳ ಲಾಭ ಪಡೆದು ಬಹುಮತ ಗಳಿಸಿಕೊಂಡರು. ಕ್ರಿಮಿನಲ್ ಆರೋಪಕ್ಕೆ ಗುರಿಯಾದ ಮೊದಲ ಪ್ರಧಾನಿ ಎಂದು ಇತಿಹಾಸ ಪಿವಿಎನ್ ಅವರನ್ನು ಗುರುತಿಸುತ್ತದೆ. ಜಾರ್ಖಂಡ್‌ ಮುಕ್ತಿ ಮೋರ್ಚಾ ಸಂಸದರ ಲಂಚ ಪ್ರಕರಣ, ಸೇಂಟ್‌ ಕಿಟ್ಟಿ ನಕಲು ಪ್ರಕರಣ, ‘ದೇವಮಾನವ‘ ಚಂದ್ರಸ್ವಾಮಿ ಭಾಗಿಯಾಗಿದ್ದ ಲಖುಭಾಯ್‌ ಪಾಠಕ್‌ ವಂಚನೆ ಪ್ರಕರಣದ ಆರೋಪ ಎದುರಿಸಿದ ಅವರು, ನಂತರದ ವರ್ಷಗಳಲ್ಲಿ ಆರೋಪಮುಕ್ತರಾದರು.

ವಯಸ್ಸು, ಆರೋಗ್ಯದ ಕಾರಣದಿಂದ ಪಿವಿಎನ್‌ ಪ್ರಧಾನಿಯಾಗಿ ಪೂರ್ಣಾವಧಿ ಪೂರೈಸುವ ನಿರೀಕ್ಷೆ ಹೆಚ್ಚಿನವರಿಗೆ ಇರಲಿಲ್ಲ. ಆದರೆ, ಅವಧಿ ಪೂರೈಸಿದರು. ಅವರ ಅವಧಿಯಲ್ಲಿ ಚರ್ಚಾಸ್ಪದವಾದ ಹಗರಣಗಳ ಪರಿಣಾಮ 1996ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿತು.

ನಂತರದ ದಿನಗಳಲ್ಲಿ ಸೋನಿಯಾಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾದರು. ಇನ್ನೊಂದೆಡೆ, ಪಿವಿಎನ್‌ ಇತ್ತ ನೇಪಥ್ಯಕ್ಕೆ ಸರಿದರು. 2004ರ  ಡಿಸೆಂಬರ್‌ 23ರಂದು (83 ವರ್ಷ) ನಿಧನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT