ಅಮೃತಸರ: ಕೃಷಿ ಕ್ಷೇತ್ರಕ್ಕೆ ಅಸಮರ್ಪಕ ವಿದ್ಯುತ್ ಪೂರೈಕೆಯನ್ನು ವಿರೋಧಿಸಿ ವಿವಿಧ ರೈತ ಸಂಘಟನೆಗಳು ಪಂಜಾಬ್ ಇಂಧನ ಸಚಿವ ಹರ್ಭಜನ್ ಸಿಂಗ್ ಅವರ ನಿವಾಸದೆದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಅಮೃತಸರದಲ್ಲಿರುವ ಸಚಿವರ ಮನೆ ಮುಂದೆ ಹೆಚ್ಚಿನ ಬ್ಯಾರಿಕೇಡ್ಗಳನ್ನು ಹಾಕಲಾಗಿತ್ತು.
ಬ್ಯಾರಿಕೇಡ್ಗಳನ್ನು ದಾಟಿ ಸಚಿವರ ಮನೆ ಕಡೆಗೆ ತೆರಳಲು ಯತ್ನಿಸಿದಾಗ ಕಿಸಾನ್ ಮಜದೂರ್ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಗಳ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಪ್ರತಿಭಟನಾಕಾರರು ಸಚಿವರ ಮನೆ ಬಳಿ ತಾತ್ಕಾಲಿಕ ವೇದಿಕೆ ನಿರ್ಮಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಗುರುವಾರ, ಪಂಜಾಬ್ನ ವಿರೋಧ ಪಕ್ಷಗಳು ಬಿಸಿಲಿನ ಶಾಖದ ನಡುವೆ ರಾಜ್ಯದ ಹಲವೆಡೆ ಉಂಟಾಗುತ್ತಿರುವ ವಿದ್ಯುತ್ ಕಡಿತದ ಬಗ್ಗೆ ಆಮ್ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಜನರಿಗೆ ರಾತ್ರಿಯಿಡೀ ವಿದ್ಯುತ್ ನೀಡುವ ಭರವಸೆಯನ್ನು ಈಡೇರಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಏರುತ್ತಿರುವ ತಾಪಮಾನದಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಿದ್ಯುತ್ ಬೇಡಿಕೆಯು ಶೇ 40 ರಷ್ಟು ಹೆಚ್ಚಾಗಿದೆ ಎಂದು ಸಿಂಗ್ ಈ ಹಿಂದೆ ಹೇಳಿದ್ದರು.