ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ದೇಶದ ವಿವಿಧ ಭಾಗಗಳ ತಜ್ಞವೈದ್ಯರೊಂದಿಗೆ ಮಂಗಳವಾರ ವರ್ಚುವಲ್ ಆಗಿ ಸಂವಾದ ನಡೆಸಿ, ದೇಶದಾದ್ಯಂತ ಇರುವ ಕೋವಿಡ್–19 ಸ್ಥಿತಿ ಕುರಿತು ಚರ್ಚಿಸಿದರು.
‘ದೇಶದಲ್ಲಿನ ಕೋವಿಡ್–19 ಸ್ಥಿತಿ ಕುರಿತು 120 ತಜ್ಞವೈದ್ಯರೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದೆ. ಅವರ ಸಲಹೆಗಳನ್ನು ಆಲಿಸಿದ್ದು, ಸೂಕ್ತ ಸೂಚನೆಗಳನ್ನು ನೀಡಲಾಯಿತು’ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
‘ಕೊರೊನಾ ಸೋಂಕಿನ ವಿರುದ್ಧ ನಾವೆಲ್ಲಾ ಒಂದಾಗಿ ಹೋರಾಡಬೇಕಿದೆ’ ಎಂದೂ ಅವರು ಟ್ವೀಟ್ನಲ್ಲಿ ಹೇಳಿದ್ದಾರೆ.
ಕೆಲ ರಾಜ್ಯಗಳ ಆರೋಗ್ಯ ಸಚಿವರು, ಉನ್ನತ ಅಧಿಕಾರಿಗಳು ಹಾಗೂ ಮಾಹಿತಿ ಆಯುಕ್ತರೊಂದಿಗೆ ಸಚಿವ ಮಾಂಡವಿಯಾ ಅವರು ವರ್ಚುವಲ್ ಮೂಲಕ ಸೋಮವಾರ ಸಂವಾದ ನಡೆಸಿದ್ದರು.