ನವದೆಹಲಿ: ವಿದೇಶಿ ವಿನಿಮಯ ಮೀಸಲು ಕೊರತೆಯಿಂದಾಗಿ ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿರುವ ಶ್ರೀಲಂಕಾಗೆ ಸಾಧ್ಯವಾದಷ್ಟು ನೆರವು ನೀಡುವುದಾಗಿ ಭಾರತ ಭರವಸೆ ನೀಡಿದೆ.
ಶ್ರೀಲಂಕಾದ ಪತ್ರಕರ್ತರೊಬ್ಬರು ಆ ದೇಶದ ವೈದ್ಯಕೀಯ ಪರಿಸ್ಥಿತಿ ಕುರಿತು 'ಶ್ರೀಲಂಕಾ ಟ್ವೀಟ್' ಟ್ವಿಟರ್ ಪುಟದಲ್ಲಿ ಹಾಕಿದ್ದ ಪೋಸ್ಟ್ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಪ್ರತಿಕ್ರಿಯಿಸಿದ್ದಾರೆ.
'ಪೆರದೆನಿಯಾ ಆಸ್ಪತ್ರೆಯಲ್ಲಿ ನಿಗದಿಯಾಗಿರುವ ಶಸ್ತ್ರಚಿಕಿತ್ಸೆಗಳು ಔಷಧಿ ಕೊರತೆಯ ಕಾರಣದಿಂದನಡೆಯುತ್ತಿಲ್ಲ. ಕೇವಲ ತುರ್ತು ಶಸ್ತ್ರಚಿಕಿತ್ಸೆಗಳನ್ನು ಮಾತ್ರವೇ ನಡೆಸಲಾಗುತ್ತಿದೆ' ಎಂದು'ಶ್ರೀಲಂಕಾ ಟ್ವೀಟ್'ನಲ್ಲಿ ಬರೆಯಲಾಗಿದೆ.
ಇದನ್ನು ಉಲ್ಲೇಖಿಸಿರುವ ಜೈಶಂಕರ್, ಈ ಸುದ್ದಿ ನೋಡಿ ಬೇಸರವಾಗಿದೆ. ಭಾರತ ಹೇಗೆ ನೆರವು ನೀಡಲು ಸಾಧ್ಯ ಎಂಬ ಬಗ್ಗೆ ಅಲ್ಲಿನ ಸರ್ಕಾರದೊಂದಿಗೆ ಚರ್ಚಿಸುವಂತೆ ಶ್ರೀಲಂಕಾಗೆ ಭಾರತದ ಹೈ–ಕಮಿಷನರ್ ಆಗಿರುವ ಗೋಪಾಲ್ ಬಗ್ಲೇ ಅವರಿಗೆ ತಿಳಿಸಿದ್ದೇನೆ ಎಂದಿದ್ದಾರೆ.
ಮಾ. 28ರಿಂದ 30ರವರೆಗೆ ಶ್ರೀಲಂಕಾ ಪ್ರವಾಸದಲ್ಲಿರುವ ಜೈಶಂಕರ್, ನೆರವು ನೀಡುವುದೂ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚಿಸಿದ್ದಾರೆ.
Disturbed to see this news. Am asking High Commissioner Baglay to contact and discuss how India can help.@IndiainSL #NeighbourhoodFirst https://t.co/jtHlGwxCBL
— Dr. S. Jaishankar (@DrSJaishankar) March 29, 2022
ಶ್ರೀಲಂಕಾಕ್ಕೆ ಭಾರತ ಇತ್ತೀಚೆಗೆ ಆರ್ಥಿಕ ನೆರವು ಘೋಷಿಸಿತ್ತು.
ವಿದೇಶಗಳಿಂದ ಸಮರ್ಪಕವಾಗಿ ಕಾಗದ ತರಿಸಲು ಆಗದಿರುವ ಕಾರಣ ಮತ್ತು ವೆಚ್ಚದಲ್ಲಿ ಭಾರಿ ಏರಿಕೆ ಆಗಿರುವುದರಿಂದಮುದ್ರಣ ಆವೃತ್ತಿಯನ್ನು ಸ್ಥಗಿತಗೊಳಿಸುವುದಾಗಿ ಅಲ್ಲಿನ ಎರಡು ಪ್ರಮುಖ ದಿನ ಪತ್ರಿಕೆಗಳು ಈಗಾಗಲೇ ಘೋಷಿಸಿವೆ. ಇತರ ಕೆಲವು ಪತ್ರಿಕೆಗಳು ಪುಟಗಳ ಸಂಖ್ಯೆಯನ್ನು ಕಡಿಮೆಗೊಳಿಸಿವೆ.
ಕಾಗದ ಮತ್ತು ಇಂಕ್ ಕೊರತೆಯ ಕಾರಣ ಶಾಲೆಗಳ ವಾರ್ಷಿಕ ಪರೀಕ್ಷೆಗಳನ್ನೂ ಕಳೆದವಾರ ಮುಂದೂಡಲಾಗಿತ್ತು.
'ಬಿಮ್ಸ್ಟೆಕ್' ಶೃಂಗಸಭೆ
ಈ ಬಾರಿ ಶ್ರೀಲಂಕಾದಲ್ಲಿ ಆಯೋಜನೆಯಾಗಿರುವ 'ಬಿಮ್ಸ್ಟೆಕ್' ಶೃಂಗಸಭೆಗೂ(ಮಾ.30) ಜೈಶಂಕರ್ ಭಾಗವಹಿಸಲಿದ್ದಾರೆ.
ಭಾರತ ಮತ್ತು ಶ್ರೀಲಂಕಾದ ಜತೆಗೆ ಬಾಂಗ್ಲಾದೇಶ, ಮ್ಯಾನ್ಮಾರ್, ಥಾಯ್ಲೆಂಡ್, ನೇಪಾಳ ಮತ್ತು ಭೂತಾನ್ ‘ಬಿಮ್ಸ್ಟೆಕ್’ನ ಸದಸ್ಯ ರಾಷ್ಟ್ರಗಳಾಗಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸದಸ್ಯ ರಾಷ್ಟ್ರಗಳ ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.