ಜಮ್ಮು: ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಇಂದು (ಭಾನುವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ನಡುವೆ ವ್ಯಕ್ತಿಯೊಬ್ಬರು ಮೋದಿಗೆ ಉಡುಗೊರೆ ನೀಡಲು 3 ಕೆ.ಜಿ ಶುದ್ಧ ಬೆಳ್ಳಿಯಿಂದ ತಯಾರಿಸಿದ ಕಮಲದ ಹೂವನ್ನು ಸಿದ್ಧಪಡಿಸಿದ್ದಾರೆ.
‘ಸಂವಿಧಾನದ 370 ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದಿರುವುದರಿಂದ ಇಲ್ಲಿ ಶಾಂತಿ ನೆಲೆಸಲು ಕಾರಣವಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸೇರಿದಂತೆ ಮೋದಿ ಅವರ ಆಡಳಿತವು ಉತ್ತಮವಾಗಿದೆ. ಹೀಗಾಗಿ ಅವರಿಗೆ ಏನಾದರೂ ಉಡುಗೊರೆ ನೀಡಬೇಕೆಂಬ ಆಲೋಚನೆ ಸದಾ ನನ್ನ ಮನಸ್ಸಿನಲ್ಲಿ ಮೂಡುತ್ತಿತ್ತು. ಸ್ವತಃ ನಾನೇ ಪಕ್ಷದ ಚಿಹ್ನೆ ಕಮಲವನ್ನು ಸಾಂಕೇತಿಕ ಎನ್ನುವಂತೆ ಕಮಲದ ಬೆಳ್ಳಿ ಕಲಾಕೃತಿಯನ್ನು ತಯಾರಿಸಿದ್ದೇನೆ’ ಎಂದು ಬಿಜೆಪಿ ಕಾರ್ಯಕರ್ತ ಹಾಗೂ ಆಭರಣ ವ್ಯಾಪಾರಿ ರಿಂಕು ಚೌಹಾಣ್ ಭಾನುವಾರ ತಿಳಿಸಿದ್ದಾರೆ.
‘ಬೆಳ್ಳಿ ಕಮಲದ ಕಲಾಕೃತಿಯನ್ನು ರಚಿಸಲು ಸುಮಾರು 15ರಿಂದ 20 ದಿನಗಳವರೆಗೂ ಸಮಯ ತೆಗೆದುಕೊಂಡೆ. ಮೋದಿ ಅವರು ನನಗೆ ದೇವರಿದ್ದಂತೆ, ಅವರು ನನ್ನ ಉಡುಗೊರೆಯನ್ನು ಇಷ್ಟಪಟ್ಟರೆ ಅದೇ ನನ್ನ ಪುಣ್ಯ’ ಎಂದು ಚೌಹಾಣ್ ಸುದ್ದಿಸಂಸ್ಥೆ ‘ಪಿಟಿಐ’ಗೆ ತಿಳಿಸಿದ್ದಾರೆ.