ಕೋಲ್ಕತ್ತ: ವಿಶ್ವ ಕುಸ್ತಿ ಒಕ್ಕೂಟ (ಯುಡಬ್ಲ್ಯೂಡಬ್ಲ್ಯೂ) ಭಾರತದ ಕುಸ್ತಿ ಫೆಡರೇಷನ್ ಸದಸ್ಯತ್ವವನ್ನು ಅಮಾನತುಗೊಳಿಸಿರುವ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರದ ಗರ್ವದಿಂದ ದೇಶದ ಕುಸ್ತಿಪಟುಗಳು ನಿರಾಸೆಗೊಳ್ಳುವಂತಾಗಿದೆ ಎಂದು ಕಿಡಿಕಾರಿದ್ದಾರೆ.
ಸರಿಯಾದ ಸಮಯಕ್ಕೆ ಚುನಾವಣೆ ನಡೆಸಲು ಭಾರತದ ಕುಸ್ತಿ ಫೆಡರೇಷನ್ ವಿಫಲವಾಗಿದೆ ಎಂಬ ಕಾರಣ ನೀಡಿ ವಿಶ್ವ ಕುಸ್ತಿ ಒಕ್ಕೂಟ ಭಾರತದ ಸದಸ್ಯತ್ವವನ್ನು ಅಮಾನತುಗೊಳಿಸಿತ್ತು. ಇದರಿಂದ ಭಾರತ ಕುಸ್ತಿಪಟುಗಳು ದೇಶದ ಧ್ವಜ ಹಿಡಿದು ಸ್ಪರ್ಧಿಸಲು ಸಾಧ್ಯವಿಲ್ಲದಂತಾಗಿದೆ.
ಈ ಬಗ್ಗೆ ತಮ್ಮ ಟ್ವಿಟರ್(ಎಕ್ಸ್) ಖಾತೆಯಲ್ಲಿ ಅಸಮಾಧಾನ ಹೊರಹಾಕಿರುವ ಬ್ಯಾನರ್ಜಿ, ‘ಭಾರತದ ಕುಸ್ತಿ ಫೆಡರೇಷನ್ ಸದಸ್ಯತ್ವವನ್ನು ಅಮಾನತುಗೊಳಿಸಿರುವ ವಿಷಯ ಕೇಳಿ ಆಘಾತವಾಗಿದೆ. ಇದು ಇಡೀ ದೇಶಕ್ಕೆ ಮುಜುಗರ ತಂದಿದೆ’ ಎಂದು ಹೇಳಿದರು.
‘ಕೇಂದ್ರ ಸರ್ಕಾರ ಗರ್ವದಿಂದ ಕುಸ್ತಿಪಟುಗಳು ನಿರಾಸೆಗೊಳ್ಳುವಂತಾಗಿದೆ. ಸ್ತ್ರೀದ್ವೇಷ ಮತ್ತು ಕೋಮುವಾದ ಮನಸ್ಥಿತಿಯ ಬಿಜೆಪಿಯ ನಮ್ಮ ಸಹೋದರಿಯರಿಗೆ ಕಿರುಕುಳ ನೀಡುತ್ತಲೆ ಬಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓದಿ: ಭಾರತ ಕುಸ್ತಿ ಫೆಡರೇಷನ್ ಸದಸ್ಯತ್ವ ಅಮಾನತುಗೊಳಿಸಿದ ವಿಶ್ವ ಕುಸ್ತಿ ಒಕ್ಕೂಟ
ಲೈಂಗಿಕ ಕಿರುಕುಳ ಆರೋಪದ ಹಿನ್ನಲೆ ಕುಸ್ತಿ ಫೆಡರೇಷನ್ ಅಧ್ಯಕ್ಷ ಸ್ಥಾನಕ್ಕೆ ಬ್ರಿಷ್ ಭೂಷಣ್ ಸಿಂಗ್ ರಾಜೀನಾಮೆ ನೀಡಿದ್ದರು. ಜುಲೈ 15 ರೊಳಗೆ ಚುನಾವಣೆ ನಡೆಸುವಂತೆ ವಿಶ್ವ ಕುಸ್ತಿ ಒಕ್ಕೂಟ ಮೇ 30ರಂದು ಸೂಚಿಸಿತ್ತು. ಚುನಾವಣೆ ನಡೆಸದೇ ಹೋದರೆ ಸದಸ್ಯತ್ವ ಅಮಾನತುಗೊಳಿಸುವ ಎಚ್ಚರಿಕೆಯನ್ನೂ ನೀಡಿತ್ತು.
ವಿಶ್ವ ಕುಸ್ತಿ ಒಕ್ಕೂಟದ ಸೂಚನೆಯನ್ನು ನಿರ್ಲಕ್ಷಿಸಿದ ಕಾರಣ ಸೆಪ್ಟೆಂಬರ್ 16 ರಿಂದ ಪ್ರಾರಂಭವಾಗುವ ಒಲಿಂಪಿಕ್ ಅರ್ಹತಾ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತೀಯ ಕುಸ್ತಿಪಟುಗಳು ‘ತಟಸ್ಥ ಕ್ರೀಡಾಪಟು’ಗಳಾಗಿ ಸ್ಪರ್ಧಿಸಬೇಕಾಗಿದೆ.