ಇಂಫಾಲ್ (ಪಿಟಿಐ): ಬುಡಕಟ್ಟು ಸಮುದಾಯಗಳಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಒದಗಿಸಲು ಆಗ್ರಹಿಸಿ ಕುಕಿ–ಜೋ ಸಮುದಾಯವು ಮಣಿಪುರದ ಕಾಂಗ್ಪೋಪಿ ಜಿಲ್ಲೆಯಲ್ಲಿ ಗುರುವಾರ ಧರಣಿ ನಡೆಸಿತು.
ಸಾದರ್ ಹಿಲ್ಸ್ ಜಿಲ್ಲೆಯ ಬುಡಕಟ್ಟು ಸಮಿತಿ(ಸಿಒಟಿಯು) ಆಶ್ರಯದಲ್ಲಿ ಧರಣಿ ನಡೆಯಿತು. ‘ನಾವು ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದೇವೆ. ಸರ್ಕಾರ ನಮಗೆ (ಬುಡಕಟ್ಟು ಜನರಿಗೆ) ಪ್ರತ್ಯೇಕ ಆಡಳಿತ ಕಲ್ಪಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಇದರ ಜತೆಗೆ, ಕಾರ್ಯಾಚರಣೆ ಅಮಾನತಿಗೆ(ಸಸ್ಪೆಂನ್ಶನ್ ಆಫ್ ಆಪರೇಷನ್) ಸಂಬಂಧಿಸಿದಂತೆ ಸರ್ಕಾರಗಳ ಜತೆ ಒಪ್ಪಂದ ಮಾಡಿಕೊಂಡಿರುವ ಕುಕಿ ಸಮುದಾಯದ ಸಂಘಟನೆಗಳ ಜತೆ ಕೇಂದ್ರ ಸರ್ಕಾರ ಮಾತುಕತೆ ನಡೆಸಬೇಕು ಎಂದೂ ಒತ್ತಾಯಿಸಿದರು.
ಕುಕಿ ಸಮುದಾಯದ ಸಂಘಟನೆಗಳಾದ ಯುನೈಟೆಡ್ ಪೀಪಲ್ಸ್ ಫ್ರಂಟ್ (ಯುಪಿಎಫ್) ಮತ್ತು ಕುಕಿ ನ್ಯಾಷನಲ್ ಆರ್ಗನೈಸೇಷನ್ (ಕೆಎನ್ಒ)ನೊಂದಿಗೆ ಕೇಂದ್ರ ಸರ್ಕಾರ ಮತ್ತು ಮಣಿಪುರ ಸರ್ಕಾರ 2008ರಲ್ಲಿ ಒಪ್ಪಂದ ಮಾಡಿಕೊಂಡಿವೆ. ಒಪ್ಪಂದವನ್ನು ಕಾಲಕಾಲಕ್ಕೆ ವಿಸ್ತರಿಸಲಾಗಿದೆ.
ಮೈತೇಯಿ ಮತ್ತು ಬುಡಕಟ್ಟು ಸಮುದಾಯಗಳ ನಡುವಿನ ಘರ್ಷಣೆ ಹಿನ್ನೆಲೆಯಲ್ಲಿ, ತಮ್ಮ ಸಮುದಾಯಕ್ಕೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಕಲ್ಪಿಸುವಂತೆ ಚಿನ್–ಕುಕಿ–ಮಿಜೊ–ಜೋಮಿ ಸಮುದಾಯದ ಹತ್ತು ಶಾಸಕರು ಈ ಹಿಂದೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಮುಖ್ಯಮಂತ್ರಿ ಬಿರೇನ್ ಸಿಂಗ್ ಈ ಬೇಡಿಕೆಯನ್ನು ತಿರಸ್ಕರಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.