ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ಎಸ್‌. ನೈಪಾಲ್‌: ಇಹಲೋಕ ತೊರೆದು ನಡೆದ ಅಲೆಮಾರಿ

Last Updated 12 ಆಗಸ್ಟ್ 2018, 20:07 IST
ಅಕ್ಷರ ಗಾತ್ರ

ಜನರ ವಲಸೆ, ದೇಶಭ್ರಷ್ಟವಾಗಿರುವುದರ ವೈರುಧ್ಯ, ನಂಬಿಕೆ ಮತ್ತು ಅಪನಂಬಿಕೆಗಳ ನಡುವಣ ಸಂಘರ್ಷ, ಬ್ರಿಟಿಷ್‌ ಸಾಮ್ರಾಜ್ಯದ ಬಗ್ಗೆ ಹಲವು ಕಾದಂಬರಿಗಳನ್ನು ಬರೆದ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಬರಹಗಾರ ವಿ.ಎಸ್‌. ನೈಪಾಲ್‌ (85) ಶನಿವಾರ ನಿಧನರಾದರು. ಈ ಎಲ್ಲ ವಿಚಾರಗಳ ಬಗ್ಗೆ ಕಾದಂಬರಿಗಳ ಜತೆಗೆ ಸೃಜನೇತರ ಕೃತಿಗಳನ್ನೂ ಅವರು ರಚಿಸಿದ್ದಾರೆ.

ವಸಾಹತೋತ್ತರ ಜಗತ್ತಿನ ವಿರೋಧಾಭಾಸಗಳ ಸಂಕೇತದಂತೆ ನೈಪಾಲ್‌ ಅವರ ಜೀವನವೂ ಇತ್ತು. ನೈಪಾಲ್‌ ಪೂರ್ವಿಕರು ಭಾರತದವರು. ನೈಪಾಲ್‌ ಜನಿಸಿದ್ದು ಟ್ರಿನಿಡಾಡ್‌ನಲ್ಲಿ. ಶಿಷ್ಯವೇತನ ಪಡೆದ ಅವರು ಆಕ್ಸ್‌ಫರ್ಡ್‌ನಲ್ಲಿ ಕಲಿತರು. ಅತ್ಯಂತ ವರ್ಣರಂಜಿತವಾದ ತಮ್ಮ ಇಡೀ ಜೀವನವನ್ನು ಅವರು ಇಂಗ್ಲೆಂಡ್‌ನಲ್ಲಿಯೇ ಕಳೆದರು. 1990ರಲ್ಲಿ ಪ್ರತಿಷ್ಠಿತ ನೈಟ್‌ ಪದವಿಯನ್ನೂ ಪಡೆದುಕೊಂಡರು.

ಕಾನ್ರಾಡ್‌, ಡಿಕನ್ಸ್‌ ಮತ್ತು ಟಾಲ್‌ಸ್ಟಾಯ್‌ಯವರಂತಹ ದಿಗ್ಗಜ ಲೇಖಕರ ಜತೆಗೆ ನೈಪಾಲ್‌ ಅವರನ್ನು ಹೋಲಿಸಲಾಗುತ್ತಿತ್ತು. ಕಟು ವಿಮರ್ಶೆಗಾಗಿಯೂ ಅವರು ಪ್ರಸಿದ್ಧರು. ವಸಾಹತುಶಾಹಿ ಮತ್ತು ಅದರಿಂದಾಗಿ ಅಸ್ತವ್ಯಸ್ತಗೊಂಡ ತೃತೀಯ ಜಗತ್ತಿನ ವಿಶ್ಲೇಷಣೆ ಅವರ ಕೃತಿಗಳಲ್ಲಿ ಇದೆ.

ವಸಾಹತುಶಾಹಿ ದೇಶಗಳು ಮತ್ತು ವಸಾಹತು ಆಡಳಿತಕ್ಕೆ ಒಳಪಟ್ಟ ದೇಶಗಳೆರಡೂ ನೈಪಾಲ್‌ ಅವರ ತೀಕ್ಷ್ಣ ವಿಮರ್ಶೆಯ ವಿಷಯಗಳಾಗಿದ್ದವು. ವಸಾಹತುಶಾಹಿ ದೇಶಗಳ ದರ್ಪ ಮತ್ತು ಸಂಪತ್ತು ಕ್ರೋಡೀಕರಣವನ್ನು ಟೀಕಿಸಿದ್ದ ಅವರು ಆಫ್ರಿಕಾ ಮತ್ತು ಕೆರೀಬಿಯನ್‌ ಪ್ರದೇಶಗಳಲ್ಲಿನ ಸ್ವಾತಂತ್ರ್ಯ ಹೋರಾಟದಲ್ಲಿನ ಆತ್ಮವಂಚನೆ ಮತ್ತು ನೈತಿಕ ದ್ವಂದ್ವವನ್ನು ಎತ್ತಿ ತೋರಿಸಿದ್ದರು.

ನಿರ್ವಸಿತ ಸ್ಥಿತಿಯನ್ನು ಅವರು ಮೂರ್ತೀಕರಿಸಿದ್ದಾರೆ. ಹುಟ್ಟೂರು ಟ್ರಿನಿಡಾಡ್‌ ಬಿಟ್ಟು ಇಂಗ್ಲೆಂಡ್‌ನಲ್ಲಿ ನೆಲೆಯಾದರೂ ಅವರಿಗೆ ಸಂಪೂರ್ಣವಾಗಿ ಅಲ್ಲಿಯವರೇ ಆಗುವುದು ಸಾಧ್ಯವಾಗಲಿಲ್ಲ. 2001ರಲ್ಲಿ ನೊಬೆಲ್‌ ಪ್ರಶಸ್ತಿ ಕೊಟ್ಟಾಗ ಸ್ವೀಡಿಷ್‌ ಅಕಾಡೆಮಿಯೂ ಅದನ್ನೇ ಹೇಳಿತ್ತು: ‘ಸಾಹಿತ್ಯಿಕ ಅಲೆಮಾರಿಯಾದ ನೈಪಾಲ್‌ ಎಂದೂ ಒಂದೆಡೆ ನೆಲೆಯೂರಲಿಲ್ಲ. ಅವರದ್ದು ಅನುಕರಿಸಲಾಗದ ಧ್ವನಿ’.

ಎಲ್ಲಿಯೂ ನಿಲ್ಲದ, ಅಸ್ತಿತ್ವಕ್ಕಾಗಿ ಸದಾ ನಡೆದ ಹುಡುಕಾಟಕ್ಕೆ ವಿಧಿ ಎಷ್ಟು ಕಾರಣವೋ ಅಷ್ಟೇ ಪ್ರಮಾಣದಲ್ಲಿ ಅದು ಅವರ ಬಯಕೆಯೂ ಆಗಿತ್ತು. ಹಿಂದೂ ಧರ್ಮೀಯರಾಗಿದ್ದರೂ ಅವರು ಆ ಧರ್ಮವನ್ನು ಪಾಲಿಸಲಿಲ್ಲ. ಬದಲಿಗೆ, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಯಾವುದೋ ಒಂದು ಜನಾಂಗ ಅಥವಾ ಧರ್ಮಕ್ಕೆ ಸೇರಿದವರು ಎಂದು ತಮ್ಮನ್ನು ಗುರುತಿಸುವುದು ಅವರಿಗೆ ಇಷ್ಟವಿರಲಿಲ್ಲ. ಪ್ರಕಾಶಕರೊಬ್ಬರು ಪುಸ್ತಕಗಳ ಪಟ್ಟಿಯಲ್ಲಿ ಅವರನ್ನು ‘ಪಶ್ಚಿಮ–ಭಾರತೀಯ ಕಾದಂಬರಿಕಾರ’ ಎಂದು ಗುರುತಿಸಿದ್ದರು. ಆ ಪ್ರಕಾಶಕರಿಗೆ ತಮ್ಮ ಯಾವ ಪುಸ್ತಕವನ್ನೂ ನೈಪಾಲ್‌ ಬಳಿಕ ಕೊಡಲಿಲ್ಲ.
(ದ ನ್ಯೂಯಾರ್ಕ್ ಟೈಮ್ಸ್‌)

***

ಖಿನ್ನತೆಯಿಂದ ಶ್ರೇಷ್ಠತೆಯೆಡೆಗೆ...
ವಿದ್ಯಾಧರ್‌ ಸೂರಜ್‌ಪ್ರಸಾದ್‌ ನೈಪಾಲ್‌ ಟ್ರಿನಿಡಾಡ್‌ನ ಷಗುವಾನಸ್‌ನಲ್ಲಿ 1932ರ ಆಗಸ್ಟ್‌ 17ರಂದು ಜನಿಸಿದರು. ಅವರ ಅಜ್ಜ 1880ರ ದಶಕದಲ್ಲಿ ಭಾರತದಿಂದ ಟ್ರಿನಿಡಾಡ್‌ಗೆ ವಲಸೆ ಹೋಗಿದ್ದರು. ಅಲ್ಲಿನ ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು. ನೈಪಾಲ್‌ ಅವರ ತಂದೆ ಶ್ರೀಪ್ರಸಾದ್‌ ಅವರು ‘ದಿ ಟ್ರಿನಿಡಾಡ್‌ ಗಾರ್ಡಿಯನ್‌’ ಪತ್ರಿಕೆಯ ವರದಿಗಾರರಾಗಿದ್ದರು. ನೈಪಾಲ್‌ ತಾಯಿ ಡ್ರೊಪಾಟಿ ಕ್ಯಾಪಿಲ್ಡಿಯೊ ಶ್ರೀಮಂತ ಕುಟುಂಬದವರು. ನೈಪಾಲ್‌ಗೆ ಆರು ವರ್ಷವಿದ್ದಾಗ ಕುಟುಂಬ ಪೋರ್ಟ್‌ ಆಫ್‌ ಸ್ಪೇನ್‌ನ (ಟ್ರಿನಿಡಾಡ್‌ ರಾಜಧಾನಿ) ದೊಡ್ಡ ಮನೆಗೆ ಸ್ಥಳಾಂತರವಾಯಿತು.

1950ರ ದಶಕದಲ್ಲಿ ಇಂಗ್ಲೆಂಡ್‌ಗೆ ಹೋದ ನೈಪಾಲ್‌ ಅವರ ಆರಂಭಿಕ ದಿನಗಳು ನೋವು ಮತ್ತು ಆತಂಕದಿಂದ ಕೂಡಿದ್ದಾಗಿತ್ತು. ಆಕ್ಸ್‌ಫರ್ಡ್‌ನ ಯುನಿವರ್ಸಿಟಿ ಕಾಲೇಜಿನಲ್ಲಿ ಓದುತ್ತಿದ್ದಾಗ ಅವರು ಮಾನಸಿಕ ಸಮಸ್ಯೆಯನ್ನೂ ಎದುರಿಸಿದ್ದರು. ಆತ್ಮಹತ್ಯೆಗೂ ಯತ್ನಿಸಿದ್ದರು.

ಬರಹಗಾರನಾಗಿ ಹೆಸರು ಪಡೆಯುವುದಕ್ಕೆ ಮೊದಲಿನ ದೀರ್ಘಕಾಲ ವೇದನಾದಾಯಕವಾಗಿತ್ತು ಎಂದು 1994ರಲ್ಲಿ ಸಂದರ್ಶನವೊಂದರಲ್ಲಿ ನೈಪಾಲ್‌ ಹೇಳಿದ್ದರು.

‘ದಿ ಮಿಸ್ಟಿಕ್‌ ಮಸ್ಸರ್‌’ (1957) ಅವರ ಮೊದಲ ಕಾದಂಬರಿ. ಶಿಕ್ಷಕ ವೃತ್ತಿಯಲ್ಲಿ ಯಶಸ್ಸು ಪಡೆಯಲಾಗದ ಗಣೇಶ್‌ ರಾಮ್‌ಸುಮಯಿರ್‌ ಎಂಬ ವ್ಯಕ್ತಿ ಆಧ್ಯಾತ್ಮ ಗುರುವಾಗಿ ಬಳಿಕ ಟ್ರಿನಿಡಾಡ್‌ನ ರಾಜಕಾರಣಿಯಾಗುವ ವಸ್ತುವನ್ನು ಈ ಕೃತಿ ಹೊಂದಿತ್ತು. ಈ ಪುಸ್ತಕದ ಬಗ್ಗೆ ಸಾಕಷ್ಟು ಶ್ಲಾಘನೆ ವ್ಯಕ್ತವಾಗಿತ್ತು.

ಬರವಣಿಗೆ ಆರಂಭಿಸಿದ ಬಳಿಕ ಪ್ರತಿ ಎರಡು ವರ್ಷಕ್ಕೊಂದು ಪುಸ್ತಕವನ್ನು ಅವರು ಪ್ರಕಟಿಸಿದ್ದಾರೆ. ‘ಎ ಹೌಸ್‌ ಫಾರ್‌ ಮಿ. ಬಿಸ್ವಾಸ್‌’ (1961) ಕಾದಂಬರಿ ನೈಪಾಲ್‌ ಅವರಿಗೆ ಭಾರಿ ಪ್ರಸಿದ್ಧಿ ತಂದು ಕೊಟ್ಟಿತು. 30ನೇ ವಯಸ್ಸಿನಲ್ಲಿ ರಚಿಸಿದ ಈ ಕೃತಿ ನೈಪಾಲ್‌ ಅವರನ್ನು ಜಗತ್ತಿನ ಅತ್ಯುತ್ತಮ ಲೇಖಕರ ಸಾಲಿನಲ್ಲಿ ನಿಲ್ಲಿಸಿತು.

‘ಎ ಬೆಂಡ್‌ ಇನ್‌ ದ ರಿವರ್‌’ (1979) ಕಾದಂಬರಿ ಕೂಡ ಹೆಚ್ಚು ಜನಪ್ರಿಯವಾಗಿದೆ. ಭಾರತದ ಬಗ್ಗೆ ಮೂರು ಪ್ರವಾಸ ಕಥನಗಳಲ್ಲಿ ಮೊದಲನೆಯದನ್ನು ‘ಆ್ಯನ್ ಏರಿಯಾ ಆಫ್‌ ಡಾರ್ಕ್‌ನೆಸ್‌’ 1964ರಲ್ಲಿ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT